ಮೈಸೂರು: ರಸ್ತೆಯಲ್ಲಿ ಹೋಗುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುವ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಕಳ್ಳನೊಬ್ಬ ತಡರಾತ್ರಿ ಮನೆಗೆ ನುಗ್ಗಿ ಗೃಹಿಣಿಯ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾನೆ.
ನಂಜನಗೂಡು ತಾಲೂಕಿನ ಕೋಡಿ ನರಸೀಪುರ ಗ್ರಾಮದ ನಂದಿನಿ ಮಾಂಗಲ್ಯ ಸರ ಕಳೆದುಕೊಂಡವರು. ಶುಕ್ರವಾರ (ನಿನ್ನೆ) ತಡರಾತ್ರಿ ಮನೆಗೆ ನುಗ್ಗಿದ್ದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ನಂದಿನಿ ಅವರ ಪತಿ ಬಸಂತ್ ಕುಮಾರ್ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಮನೆಯ ಬಾಗಿಲನ್ನು ಮುರಿದು ಒಳ ಬಂದ ಕಳ್ಳ, ನಂದಿನಿ ಬಾಯಿಯನ್ನು ಬಲವಂತವಾಗಿ ಮುಚ್ಚಿಸಿದ್ದಾನೆ. ಬಳಿಕ 1.2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಜಾಗ ಖಾಲಿ ಮಾಡಿದ್ದಾನೆ.
ಕೂಡಲೇ ನಂದಿನಿ ಕಿರಿಚಾಡಿದ್ದರಿಂದ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಆಕೆಯ ಬಾವ ನಾರಾಯಣ ಮೂರ್ತಿ ಹೊರಬಂದ್ರು. ಆದರೆ ಅವರು ನೋಡುವಷ್ಟರಲ್ಲಿ ಸರಗಳ್ಳ ಸ್ಥಳದಿಂದ ಕಾಲ್ಕಿತ್ತಿದ್ದನು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಸ್ಪೆಕ್ಟರ್ ಶಿವಮೂರ್ತಿ, ದೊಡ್ಡ ಕವಲಂದೆ ಠಾಣೆ ಪಿಎಸ್ಐ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews