ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೂಜುಮಲೆ ಅರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ಮುಂಜಾಗೃತ ಕ್ರಮವಾಗಿ ಬಾಳುಗೋಡು ಸುತ್ತಮುತ್ತಲಿನ ಹಲವು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಮಹಾಮಳೆಗೆ ಗುಡ್ಡಗಳು ಹಸಿಯಾಗಿ, ಮಣ್ಣು ಸಡಿಲಗೊಂಡಿದೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಗುಡ್ಡ ಕುಸಿತವಾಗುತ್ತಿದ್ದು, ಇಂದು ಸುಳ್ಯ ತಾಲೂಕು ಕೂಜುಮಲೆಯ ಕೆಲವು ಭಾಗದಲ್ಲಿಯೂ ಗುಡ್ಡ ಕುಸಿಯುತ್ತಿದೆ. ಕೂಜುಮಲೆಯ ಅರಣ್ಯದ ಅಡಿಯಲ್ಲಿರುವ ಮಾನಡ್ಕ, ಅಡ್ಕರ್, ಕಲ್ಮಕಾರು ಬಾಳುಗೋಡು ಸೇರಿದಂತೆ ಹಲವು ಗ್ರಾಮಗಳ ನಿವಾಸಿಗಳನ್ನು ಪೊಲೀಸರು ಸ್ಥಳಾಂತರ ಮಾಡುತ್ತಿದ್ದಾರೆ.
ಭಾರೀ ರಭಸದಿಂದ ನೀರು ಹರಿಯುತ್ತಿದ್ದು, ಕೂಜುಮಲೆ ಅರಣ್ಯ ಪ್ರದೇಶದಿಂದ ಮರಗಳು ಬುಡ ಸಮೇತ ಕಿತ್ತು ಬರುತ್ತಿದೆ. ಸಂಪಾಜೆ ಗಡಿಯಲ್ಲಿರುವ ಮದೇನಾಡು, ಜೋಡುಪಾಲದಲ್ಲಿ ಮನೆಗಳ ಮೇಲೆ ಬೆಟ್ಟಗಳು ಬೀಳುತ್ತಿರುವ ಹಿನ್ನೆಲೆಯಲ್ಲಿ ಈ ನಿವಾಸಿಗಳ ಮನೆಗಳ ಮೇಲೂ ಕುಸಿತವಾಗಬಹುದು ಎನ್ನುವ ಆತಂಕದಲ್ಲಿ ಎಚ್ಚೆತ್ತ ಬಾಳುಗೋಡು ಪೊಲೀಸರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv