ಬೆಳಗಾವಿ: ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಮನ್ಸ್ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದು, ಗುರುವಾರ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಕೇಳಿ ಬರುತ್ತಿದೆ ಎಂಬುವುದು ಗೊತ್ತಾಗುತ್ತಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸೋದರ ಚನ್ನರಾಜು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
2017 ಜನವರಿಯಲ್ಲಿ ಐಟಿ ಅಧಿಕಾರಿಗಳು ನಮ್ಮ ಮನೆ, ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದರು. ಅಂದು ಅಧಿಕಾರಿಗಳಿಗೆ ಯಾವುದೇ ರೀತಿಯ ಅಕ್ರಮ ಆಸ್ತಿಯ ಬಗ್ಗೆ ದಾಖಲೆಗಳು ಲಭ್ಯವಾಗಿಲ್ಲ. ನಮ್ಮ ಎಲ್ಲ ವ್ಯವಹಾರಗಳು ಸ್ಪಷ್ಟವಾಗಿವೆ. ಡಿಕೆ ಶಿವಕುಮಾರ್ ರಾಜ್ಯಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜ್ಯದ ಬಹುತೇಕ ಕಾರ್ಯಕರ್ತರಿಗೆ ರಾಜಕೀಯವಾಗಿ ಮೇಲೆ ಬರಲು ಸಹಾಯ ಮಾಡಿದ್ದಾರೆ. ಹಾಗೆಯೇ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ರಾಜಕೀಯವಾಗಿ ಸಹಾಯ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ನಮ್ಮ ಮಾರ್ಗದರ್ಶಕರು. ಆದ್ರೆ ನಮ್ಮ ಕುಟುಂಬ ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂಡೋನೇಷಿಯಾದಲ್ಲಿ ಕಲ್ಲಿದ್ದಲು ವ್ಯವಹಾರ ಮಾಡುತ್ತಿದ್ದೇನೆ. ಬಳ್ಳಾರಿಯಲ್ಲಿ ಸೋಲಾರ್ ಪವರ್ ವ್ಯವಹಾರವಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದದ್ದು, ದಯವಿಟ್ಟು ಆಧಾರ ರಹಿತ ಆರೋಪಗಳನ್ನು ಮಾಡಬೇಡಿ. ಕಾಲ್ಪನಿಕವಾಗಿ ಸುದ್ದಿ ಮಾಡುವ ಮೊದಲು ನಮ್ಮಿಂದ ಸ್ಪಷ್ಟನೆ ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡರು.
ಇಡಿ ಇಲಾಖೆಯ ಸುಮಾರು 184 ಜನರಿಗೆ ಸಮನ್ಸ್ ನೀಡಿದ್ದಾರೆ. ಕೇವಲ ನಮಗೆ ಮಾತ್ರ ಸಮನ್ಸ್ ನೀಡಿಲ್ಲ. 184ರಲ್ಲಿ ನಮ್ಮನ್ನು ಸಹ ಕರೆದಿದ್ದಾರೆ. ವಿಚಾರಣೆಗೆ ಹಾಜರಾದ ಮೇಲೆ ಅಲ್ಲಿ ಏನು ನಡೆಯುತ್ತದೆ ಎಂಬ ವಿಷಯ ಅರ್ಥವಾಗುತ್ತದೆ. ವಿಚಾರಣೆಗೂ ಮೊದಲು ಕೇಳಿದ್ರೆ ನಮಗೆ ಏನು ಗೊತ್ತಾಗಬೇಕು. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ವಿಚಾರಣೆಗೆ ಕರೆದಿದ್ದಾರೆ ಹೋಗುತ್ತೇವೆ. ಅಧಿಕಾರಿಗಳು ಕೇಳುವ ಪ್ರಶ್ನೆಗೆ ನಮಗೆ ಗೊತ್ತಿರುವಷ್ಟು ಮಾಹಿತಿಯನ್ನು ತಿಳಿಸುತ್ತೇವೆ. ವಿಚಾರಣೆಗೆ ನಮ್ಮಿಂದ ಯಾವುದೇ ತೊಂದರೆ ಆಗಲ್ಲ ಎಂದು ತಿಳಿಸಿದರು.