ಬೆಳಗಾವಿ: ಪಿಎಲ್ಡಿ ಬ್ಯಾಂಕ್ ಚುನಾವಣೆ ಸಂಬಂಧ ಪರಸ್ಪರ ಕಿತ್ತಾಡಿಕೊಂಡಿದ್ದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕಪಕ್ಕ ಕುಳಿತುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕೆಎಲ್ಎ ಸಂಸ್ಥೆಯ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಆಗಮಿಸಿದ್ದರು. ಸತೀಶ್ ಜಾರಕಿಹೊಳಿ ಪಕ್ಕದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಕುಳಿತ್ತಿದ್ದರು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸುತ್ತಿದ್ದಂತೆ ಪ್ರಕಾಶ ಹುಕ್ಕೇರಿ ಜಾಗ ಬಿಟ್ಟುಕೊಟ್ಟಿದ್ದಾರೆ. ನಂತರ ಲಕ್ಷ್ಮಿ ಅವರು ಸತೀಶ್ ಜಾರಕಿಹೊಳಿ ಪಕ್ಕದಲ್ಲಿ ಹೋಗಿ ಕುಳಿತ್ತಿದ್ದಾರೆ. ಇದನ್ನು ಕಾರ್ಯಕ್ರದಲ್ಲಿದ್ದವರು ನೋಡಿ ನಗುತ್ತಾ ವಿಡಿಯೋ ಮಾಡಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರನ್ನು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರೂ ಪ್ರತ್ಯೇಕವಾಗಿ ಸ್ವಾಗತಿಸಿದ್ದರು. ಈ ವೇಳೆ ಸಿಎಂ ಅವರು ರಮೇಶ್ ಜಾರಕಿಹೊಳಿ ಕೆನ್ನೆ ಸವರಿ ಮಾತನಾಡಿದರು.
ಬೆಳಗಾವಿಯ ಕೆಎಲ್ಇ ಸಂಸ್ಥೆಯ 75ನೇ ವರ್ಷದ ಅಮೃತಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿಯನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಸ್ವಾಗತಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಜಿಐಟಿ ಕಾಲೇಜು ಆವರಣಕ್ಕೆ ರಾಷ್ಟ್ರಪತಿ ಆಗಮಿಸಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ನಗರದಲ್ಲಿ ಚೆನ್ನಮ್ಮ ವೃತ್ತ ಸೇರಿದಂತೆ ಬೆಳಗಾವಿ ಖಾನಾಪುರ ರಸ್ತೆ, ಸಾಂಬ್ರಾ ಬೆಳಗಾವಿ ರಸ್ತೆಯ ಸಾರ್ವಜನಿಕ ಸಂಚಾರವನ್ನ ಸಂಪೂರ್ಣವಾಗಿ ಬಂದ್ ಮಾಡಿ ಉಳಿದಂತೆ ರಸ್ತೆ ಮಾರ್ಗಗಳನ್ನ ಬದಲಿಸಲಾಗಿತ್ತು. ಈ ಮಧ್ಯೆ, ರಾಷ್ಟ್ರಪತಿಗಳು ಬರ್ತಿದ್ದಾರೆ ಎಂಬ ಕಾರಣಕ್ಕೆ ರಸ್ತೆಗಳಿಗೆ ಡಾಂಬರ್ ಭಾಗ್ಯ ಕೊಟ್ಟಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv