ಗದಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚಮಸಾಲಿ ಮತಗಳ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಐವರು ಲಿಂಗಾಯತ ಸಮುದಾಯದವರಿಗೆ ಐದು ಟಿಕೆಟ್ ಕೊಟ್ಟಿದೆ. ಈಗ ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ಗೆ ವೋಟು ಹಾಕುವಂತೆ ಮನವಿ ಮಾಡುತ್ತಿದೆ.
ಡಿ.ಆರ್.ಪಾಟೀಲ್ ನೋಡಿದರೆ ಪೂಜ್ಯ ಭಾವನೆ ಬರುತ್ತದೆ. ಎಂತಹ ವಿರೋಧಿಗಳು ಮತ ಹಾಕುವಂತ ವ್ಯಕ್ತಿ ಡಿ.ಆರ್. ಪಾಟೀಲ್ ಅವರಿಗೆ ಮತ ಹಾಕಿದರೆ ದೇವರಿಗೆ ಮತ ಹಾಕಿದಂತೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗದಗನಲ್ಲಿ ಆಯೋಜನೆ ಮಾಡಲಾಗಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ನೀವು ದೇವರಿಗೆ ಮತ ಹಾಕುತ್ತಿದ್ದೀರಿ. ನಮ್ಮ ಪಂಚಮಸಾಲಿ ಸಮಾಜದ ಜನರು ಡಿ.ಆರ್ ಪಾಟೀಲ್ ಮತ ಹಾಕಿ. ಕಾಂಗ್ರೆಸ್ ಪಕ್ಷ ಐದು ಲಿಂಗಾಯತ ಮುಖಂಡರಿಗೆ ಟಿಕೆಟ್ ನೀಡಿದೆ. ಇವರನ್ನು ಗೆಲ್ಲಿಸುವ ಮೂಲಕ ಉಪಕಾರ ಸ್ಮರಣ ಮಾಡಬೇಕು ಎಂದು ಸಮಾಜಕ್ಕೆ ಕೈಮುಗಿದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಪಂಚಮಸಾಲಿ ಕಾರ್ಯಕರ್ತರು ಇದಕ್ಕೆ ಒಪ್ಪಿಗೆ ಸೂಚಿಸಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಬರಿ ಪುಲ್ವಾಮಾ ಬಗ್ಗೆ ಮಾತನಾಡುತ್ತಿದ್ದಾರೆ. ಯುವಕರು ಮೋದಿಗೆ ಮರಳಾಗಿದ್ದಾರೆ. ತಾಯಂದಿರು ಮಕ್ಕಳ ಮನಸ್ಸು ಬದಲಿಸಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.