ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುವ ಮೂಲಕ ಸಿಡಿದೆದ್ದಿದ್ದಾರೆ.
ರೈತರ ವಿರೋಧದ ನಡುವೆಯೂ ಹಲಗಾ ಗ್ರಾಮದಲ್ಲಿ ಎಸ್ಟಿಪಿ ಪ್ಲಾಂಟ್ ಕಾಮಗಾರಿ ಆರಂಭ ಆದ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಕಾಏಕಿ ಬೆಳಗ್ಗೆ 8 ಗಂಟೆಗೆ ಹೋಗಿ ರೈತರ ಜಮೀನು ಕಬ್ಜಾ ಮಾಡಿ ಎಂದು ಹೇಳಿ ಇಂದಿಗೆ ಒಂಬತ್ತು ದಿನಗಳೇ ಕಳೆದಿದೆ. ನಾನು ಇಷ್ಟು ದಿನ ಸಿಎಲ್ಪಿ(ಕಾಂಗ್ರೆಸ್ ಶಾಸಕಾಂಗ ಸಭೆ) ಸಭೆಗೆಂದು ಬೆಂಗಳೂರಿಗೆ ಹೋಗಿದ್ದೆ. ಅದಕ್ಕಿಂತ ಒಂದು ದಿನದ ಮೊದಲು ನಾನು ಜಿಲ್ಲಾಧಿಕಾರಿಗಳನ್ನು ಹಾಗೂ ಚಂದ್ರಪ್ಪ ಅವರನ್ನು ಡಿಸಿ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ಆದರೆ ಆ ಸಂದರ್ಭದಲ್ಲಿ ಅವರು ನನ್ನ ಗಮನಕ್ಕೆ ತರಲಿಲ್ಲ ಹಾಗೂ ನಿಮ್ಮ ಸಹಕಾರ ನೀಡಿ ಎಂದು ಕೇಳಲಿಲ್ಲ ಎಂದರು.
ಅಭಿವೃದ್ಧಿಗೆ ನಾನು ಎಂದಿಗೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಹಲಗಾ ಗ್ರಾಮಕ್ಕೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಪದೇ ಪದೇ ಅನ್ಯಾಯ ಆಗುತ್ತಿದೆ. 2008ರಲ್ಲಿ ಇದೇ ಹಲಗಾ ಗ್ರಾಮಸ್ಥರು ಜಮೀನನ್ನು ಸುವರ್ಣ ಸೌಧ ಕಟ್ಟಲು ವಶ ಪಡೆದುಕೊಂಡಿದ್ದರು. ಆಗ ರೈತರ ಹೋರಾಟ ನಡೆಯಿತು. 2009ರಲ್ಲಿ ಅಂದಿನ ಸರ್ಕಾರ ಎಸ್ಟಿಪಿ ಪ್ಲಾಂಟ್ ಹಲಗಾ ಊರಿನಲ್ಲಿ ಮಾಡಬೇಕು ಎಂದು ಹೇಳಿ ನಿರ್ಣಯ ತೆಗೆದುಕೊಂಡಿದ್ದರು. 1 ವರ್ಷದ ಮೊದಲು 13 ಲಕ್ಷ ರೂ. ಕೊಟ್ಟಿದ್ದರು. 1 ವರ್ಷದ ನಂತರ 3 ಲಕ್ಷ ರೂ. ನೀಡಿದ್ದಾರೆ. ಈ ರೀತಿ ಅನ್ಯಾಯ ಆಗಿದ್ದಕ್ಕೆ ರೈತರು ಜಮೀನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಸುವರ್ಣಸೌಧದ ಸುತ್ತಮುತ್ತ ಗ್ರೀನ್ ಬೆಲ್ಟ್ ಎಂದು ಮಾಡಿದ್ದಾರೆ. ಗ್ರೀನ್ ಬೆಲ್ಟ್ ಮಾಡಿದರೆ ಅಲ್ಲಿ ಮನೆ ಕಟ್ಟಲು ಆಗುವುದಿಲ್ಲ, ಮಾರುವುದಕ್ಕೂ ಆಗಲ್ಲ. ಬಹಳಷ್ಟು ಬಡಜನರು ಇದ್ದಾರೆ. ಈ ಭಾಗದ ಜನರು ದುಃಖಗಳನ್ನು ಸರಿಪಡಿಸಬೇಕು ಎಂಬ ಉದ್ದೇಶದಿಂದ ಸುವರ್ಣಸೌಧ ಕಟ್ಟಿದ್ದಾರೆ. ನಾನು ರೈತರನ್ನು ಕರೆದು ಸಮಾಧಾನದಿಂದ ಮಾತನಾಡಿದ್ದೇನೆ. ಈ ಕಡೆ ಜಿಲ್ಲಾಡಳಿತದ ಬಳಿ ನಾವು ಮಾತನಾಡುತ್ತೇವೆ ಎಂದು ಉತ್ತರಿಸುತ್ತಾರೆ. ಕೆಯೂಡಬ್ಲೂಎಸ್ ರೈತರು ಬೆಳೆದಂತಹ ಬೆಳೆಗೆ ಬೆಲೆ ಜಾಸ್ತಿ ಮಾಡುತ್ತಿದ್ದೀರಿ. ಆದರೆ ಇದೂವರೆಗೂ ಪರಿಹಾರ ನೀಡಿಲ್ಲ. ಅನ್ಯಾಯ ಆಗಿದೆ ಇದನ್ನು ಸರಿ ಮಾಡುವ ಕೆಲಸ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿದೆ ಎಂದರು.
ಯಾವುದೇ ಕಾರಣಕ್ಕೂ ಬೆಳಗಾವಿ ಗ್ರಾಮೀಣದ ಜಮೀನು ಕೊಡುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಈಗ ಏನೇ ಕೆಲಸ ಆಗಬೇಕು ಎಂದರೆ ಬೆಳಗಾವಿ ಗ್ರಾಮೀಣವನ್ನು ಹಿಡಿಯುತ್ತಾರೆ. ಇದೇ ಹಲಗಾ ಊರಿನ ಜನತೆ ಕುಡಿಯುವುದಕ್ಕೆ ನೀರು ಇಲ್ಲ. ನೀರು ಬೇಕು ಎಂದರೆ ಕಾರ್ಪೋರೇಶನ್ ನವರು ತಿರುಗಿ ಸಹ ನೋಡುವುದಿಲ್ಲ. ಜಿಲ್ಲಾಡಳಿತ ನಮ್ಮ ಕಡೆ ನೋಡುವುದಿಲ್ಲ. ನಮ್ಮ ಧ್ವನಿಗೆ ಯಾರೂ ಕಿವಿ ಕೊಡುವುದಿಲ್ಲ. ಅವರಿಗೆ ಹೃದಯಾನೇ ಇಲ್ಲ ಎಂದು ಆರೋಪಿಸಿದ್ದಾರೆ. ಮುಂದಿನ ಹೋರಾಟ ಜಿಲ್ಲಾ ಮಂತ್ರಿಗಳಿಗೆ ಬಯಸುತ್ತೇನೆ. ತಮ್ಮ ಒಂದು ನೇತೃತ್ವದಲ್ಲಿ ಒಂದು ನಿಯೋಗ ತೆಗೆದುಕೊಂಡು ತುರ್ತಾಗಿ ಸಿಎಂ ಅವರ ಜೊತೆ ಸಭೆ ನಡೆಯಬೇಕು. ಸಭೆಯಲ್ಲಿ ರೈತರ ಪರಿಹಾರ, ಅವರ ಭವಿಷ್ಯದ ಬಗ್ಗೆ ತೀರ್ಮಾನ ಮಾಡಬೇಕು. ಜಿಲ್ಲಾ ಮಂತ್ರಿಯೇ ಖುದ್ದಾಗಿ ನೋಡಿಕೊಳ್ಳಬೇಕು ಎಂದಿದ್ದಾರೆ.