– ದೀಪಗಳಿಂದ ಕಂಗೊಳಿಸಿದ ಶ್ರೀಕ್ಷೇತ್ರ ಧರ್ಮಸ್ಥಳ
ಮಂಗಳೂರು: ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಐದು ದಿನಗಳ ಕಾಲ ನಡೆದ ಲಕ್ಷ ದೀಪೋತ್ಸವಕ್ಕೆ ತೆರೆ ಬಿದ್ದಿದೆ. ದೀಪೋತ್ಸವದ ಸಂಭ್ರಮದಲ್ಲಿ ಲಕ್ಷಾಂತರ ಭಕ್ತರು ದೇಗುಲಕ್ಕೆ ಆಗಮಿಸಿ ಮಂಜುನಾಥ ದೇವರ ದರ್ಶನ ಪಡೆದರು. ಜಗಮಗಿಸುವ ದೀಪಾಲಂಕಾರವನ್ನು ಕಣ್ತುಂಬಿಕೊಂಡರು.
ಕಾರ್ತಿಕ ಮಾಸದ ಲಕ್ಷ ದೀಪದ ಸಂಭ್ರಮ ಸಡಗರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಐದು ದಿನಗಳ ಕಾಲ ಮೇಳೈಸಿತ್ತು. ಧರ್ಮಸ್ಥಳ ಕ್ಷೇತ್ರ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಭಕ್ತ ಸಾಗರವೇ ಕ್ಷೇತ್ರದಲ್ಲಿ ಶಿನ ಸ್ಮರಣೆ ಮಾಡಿದರು. ಹೌದು, ಕಳೆದ ಐದು ದಿನಗಳಿಂದ ಪವಿತ್ರ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿದೆ ಲಕ್ಷ ದೀಪೋತ್ಸವ ನಡೆಯಿತು. ದೀಪೋತ್ಸವ ಹಿನ್ನೆಲೆ ದೇಗುಲದ ಮುಂಭಾಗವನ್ನು ಹೂವಿನಿಂದ ಅಲಂಕರಿಸಲಾಗಿತ್ತು.
ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿಮಾರುಕಟ್ಟೆ ಉತ್ಸವ, ಗೌರಿ ಮಾರುಕಟ್ಟೆ ಉತ್ಸವದ ಜೊತೆಗೆ ಸರ್ವ ಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ ಹೀಗೆ ವಿವಿಧ ಸಮ್ಮೇಳನಗಳು ನಡೆಯಿತು. ದೇವಸ್ಥಾನ, ಅನ್ನ ಛತ್ರ ರಾಜಬೀದಿಗಳು ದೀಪಾಲಂಕಾರದಿಂದ ಕಂಗೊಳಿಸಿತ್ತು.
ಐದು ದಿನಗಳ ಕಾಲ ನಡೆದ ಲಕ್ಷ ದೀಪದ ಸಂಭ್ರಮದಲ್ಲಿ ಕರಾವಳಿ ಮಾತ್ರವಲ್ಲದೇ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.