ಬೆಂಗಳೂರು: ನಗರದ ಉಳ್ಳಾಲ ವಾರ್ಡ್ನ ದುಬಾಸಿಪಾಳ್ಯ ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ.
ಕೆರೆಗೆ ಸುತ್ತಲಿನ ಕಾರ್ಖಾನೆಗಳಿಂದ ವಿಷ ತ್ಯಾಜ್ಯ ರಾಸಾಯನಿಕಗಳನ್ನು ಸೇರಿಸಲಾಗುತ್ತಿದೆ. ಹೀಗಾಗಿ ಕೆರೆಯಲ್ಲಿ ಕಳೆದ 15 ದಿನಗಳಿಂದ ಮೀನುಗಳು ಇತರೆ ಜಲಚರಗಳ ಸಾವಿಗೆ ಕಾರಣವಾಗಿದೆ. ಕೆರೆಯಲ್ಲಿ ನೀರಿನಿಂದ ದುರ್ಗಂಧ ಬರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಜನಪ್ರತಿನಿಧಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕೆರೆ ಒಂದು ಕಾಲದಲ್ಲಿ ಶುದ್ಧವಾಗಿದ್ದು ಕೆರೆ ನೀರನ್ನ ಕುಡಿಯಲು ಬಳಸಲಾಗುತಿತ್ತು. ಅಭಿವೃದ್ಧಿ ಹೆಸರಲ್ಲಿ ಕೆರೆ ಸುತ್ತಮುತ್ತ ಕಾರ್ಖಾನೆಗಳು ಯಥೇಚ್ಚವಾಗಿ ತಲೆ ಎತ್ತಿ ಕೆರೆಯನ್ನ ಈ ದುಸ್ಥಿತಿಗೆ ತಂದಿದೆ ಎಂದು ಸ್ಥಳೀಯರು ನೋವನ್ನು ವ್ಯಕ್ತಪಡಿಸುತ್ತಾರೆ.