ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಕೆರೆಯನ್ನು ಸ್ವಚ್ಛ ಮಾಡುವಾಗ ಕೆರೆ ಕಟ್ಟೆ ಒಡೆದು ಮನೆಗಳಿಗೆ ನೀರು ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ನಲ್ಲಿ ನಡೆದಿದೆ.
ಹುಳಿಮಾವು ಕೆರೆಯ ಕಟ್ಟೆ ಒಡೆದು ಈ ಅವಾಂತರ ಸೃಷ್ಟಿಯಾಗಿದೆ. ಇಂದು ಬೆಳಗ್ಗೆಯಿಂದ ಬಿಬಿಎಂಪಿ ವತಿಯಿಂದ ಕೆರೆಯ ಕಾಮಗಾರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಕೆರೆಯ ನೀರನ್ನು ಬೇರೆಡೆಗೆ ಹರಿಸುವ ಕೆಲಸ ನಡೆಯುತ್ತಿತ್ತು. ಆಗ ಕೆರೆಯ ಕಟ್ಟೆ ಒಡೆದಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಹುಳಿಮಾವು ಕೆರೆ ಒಟ್ಟು 140 ಎಕರೆ ಇರುವುದರಿಂದ ಕೆರೆಯ ಅಕ್ಕಪಕ್ಕದ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಶಾಂತಿನಿಕೇತನ, ಕೃಷ್ಣನಗರ, ಹುಳಿಮಾವು ಸೇರಿದಂತೆ ಹಲವು ಲೇಔಟ್ಗಳಿಗೆ ನೀರು ನುಗ್ಗಿದೆ. ನೀರನ್ನ ತಡೆಯಲು ಪಾಲಿಕೆಯ ಅಧಿಕಾರಿಗಳು ಹರಸಹಾಸ ಪಡುತ್ತಿದ್ದಾರೆ. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರಿಂದ ಸ್ಥಳೀಯರು ಮತ್ತಷ್ಟು ಮನೆಗಳು ಮುಳುಗಡೆಯಾಗುವ ಆತಂಕದಲ್ಲಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪಾಲಿಕೆಯ ಕಾರ್ಪೋರೇಟರ್ಗಳು ಮತ್ತು ಕಮಿಷನರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ ಸ್ಥಳೀಯ ಕಾರ್ಪೋರೇಟರ್ ಅನುಮತಿಯಿಲ್ಲದೇ ಕೆರೆಯ ನೀರನ್ನ ಖಾಲಿ ಮಾಡುವ ಕೆಲಸ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.