ಚಿಕ್ಕಬಳ್ಳಾಪುರ: ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಿಗೆ ಸೀಮಿತವಾಗಿದ್ದ ಜಲವಿವಾದಗಳು ಈಗ ಅಂತರ್ ತಾಲೂಕು ವ್ಯಾಪ್ತಿಗೂ ವ್ಯಾಪಿಸಿದೆ. ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಭಾರೀ ಉತ್ತಮ ಮಳೆಯಾಗಿದ್ದೇ ತಡ ಜಿಲ್ಲೆಯ ಗೌರಿಬಿದನೂರು ತಾಲೂಕು ಹಾಗೂ ಗುಡಿಬಂಡೆ ತಾಲೂಕಿನ ಜನರ ನಡುವೆ ಒಂದು ಕೆರೆಯ ನೀರಿಗಾಗಿ ಕಾದಾಟ ನಡೆದಿದೆ.
ಬ್ರಿಟಿಷರ ಆಡಳಿತ ಕಾಲದಲ್ಲಿ ನಿರ್ಮಾಣವಾಗಿದ್ದ ಗುಡಿಬಂಡೆ ಪಟ್ಟಣದಲ್ಲಿ ಅಮಾನಿ ಬೈರ ಸಾಗರ ಎಂಬ ಕೆರೆ ಇದೆ. ಕೆರೆ ತುಂಬಿದ ಮೇಲೆ ಹೆಚ್ಚುವರಿ ನೀರನ್ನ ಗೌರಿಬಿದನೂರು ತಾಲೂಕು ವಾಟದಹೊಸಹಳ್ಳಿ ಕೆರೆಗೆ ಬಿಡಬೇಕು ಎಂಬ ಕರಾರು ಮಾಡಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಗುಡಿಬಂಡೆಯ ಅಮಾನಿ ಬೈರಸಾಗರ ಕೆರೆ ಕೋಡಿನ ಹರಿದಿದೆ.
ಕರಾರು ಏನು: ಕೆರೆ ನಿರ್ಮಾಣವಾದ ಸಮಯದಲ್ಲಿ ಎರಡು ಗ್ರಾಮಗಳ ಒಪ್ಪಂದ ಏರ್ಪಟ್ಟಿತ್ತು. ಅಮಾನಿ ಬೈರ ಸಾಗರದಲ್ಲಿ 18 ಅಡಿ ನೀರು ಸಂಗ್ರಹವಾದ ಮೇಲೆ, ಹೆಚ್ಚಿನ ನೀರನ್ನು ವಾಟದಹೊಸಹಳ್ಳಿ ಕೆರೆಗೆ ಬಿಡಬೇಕು ಎಂದು ಒಪ್ಪಂದವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಕೆರೆಯ ನೀರಿನ ಸಂಗ್ರಹವನ್ನು 23 ಅಡಿಗೆ ಹೆಚ್ಚಿಸಲಾಗಿತ್ತು. ಹೊಸ ಒಪ್ಪಂದ ಬಳಿಕ 8 ವರ್ಷಗಳ ಹಿಂದೆ ಒಮ್ಮೆ ಕೆರೆ ತುಂಬಿತ್ತು.
ಕೆರೆ ತುಂಬಿದ್ದು ತಮ್ಮ ನೀರಿನ ಭಾಗವನ್ನ ತಮಗೆ ಕೊಡಿ ಎಂದು ವಾಟದಹೊಸಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇತ್ತ ಇಲ್ಲ ನಾವೂ ನೀರು ಬಿಡಲು ಆಗುವುದಿಲ್ಲ. ಇನ್ನೂ ಗುಡಿಬಂಡೆ ಗ್ರಾಮದ ಇನ್ನೂ ಹಲವು ಕೆರೆಗಳು ತುಂಬಿಲ್ಲ. ಇದೇ ಕೆರೆಯ ನೀರಿನಿಂದ ಉಳಿದ ಕೆರೆಗಳು ತುಂಬುತ್ತವೆ, ನಾವು ಈ ನೀರನ್ನು ಕುಡಿಯುವದಕ್ಕಾಗಿ ಬಳಸುತ್ತೇವೆ. ಒಂದು ವೇಳೆ ನಿಮಗೆ ನೀಡಿದರೆ ನೀವು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತೀರಿ ಎಂದು ಗುಡಿಬಂಡೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಜಲವಿವಾದ ವಾಟದಹೊಸಹಳ್ಳಿ ಹಾಗೂ ಗುಡಿಬಂಡೆ ತಾಲೂಕಿನ ಜನರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದು, ಸಮಸ್ಯೆ ಕ್ಷೇತ್ರದ ಶಾಸಕರ ನಡುವೆ ಕೂಡ ಹೋರಾಟಕ್ಕೆ ನಾಂದಿ ಹಾಡಿದೆ. ಈ ಹಿಂದೆ ಬರಗಾಲದಲ್ಲಿ ಜಿಲ್ಲಾಧಿಕಾರಿಗಳು ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ನೀರು ಬಿಡಲಿಲ್ಲ ಅಂದ್ರೆ ರಾಜಕೀಯವಾಗಿ ಹೋರಾಟ ಮಾಡುವುದಗಿ ಗೌರಿಬಿದನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.