ಬೆಂಗಳೂರು: ಅತ್ತೆ, ಮಾವನ ಕೊಂಕು ಮಾತಿನಿಂದ ಗಲಾಟೆ ನಡೆಯಿತು ಎಂದು ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ವೈದ್ಯೆ ಪ್ರಿಯದರ್ಶಿನಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಅತ್ತೆ ಹಾಗೂ ಮಾವನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಪ್ರಿಯದರ್ಶಿನಿ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ವಿಚಾರಣೆ ಹಾಜರಾಗಿದ್ದ ಪ್ರಿಯದರ್ಶನಿ ಗಲಾಟೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.
ನನ್ನ ಪುತ್ರ 10ನೇ ತರಗತಿ ಓದುತ್ತಿದ್ದಾನೆ. ಮುಂದಿನ ಓದಿನ ಬಗ್ಗೆ ಚರ್ಚೆ ನಡೆಸಲು ನಾನು ಅನ್ನಪೂರ್ಣೇಶ್ವರಿ ನಗರದಲ್ಲಿ ನೆಲೆಸಿರುವ ವೈದ್ಯ, ಪುತ್ರನ ತಂದೆಯ ನಿವಾಸಕ್ಕೆ ಆಗಮಿಸಿದ್ದೆ. ಈ ಸಂದರ್ಭದಲ್ಲಿ ನನ್ನ ಬಳಿಯಿದ್ದ ಸಣ್ಣ ಮಗುವನ್ನು ಕಂಡು ಅನುಮಾನದಿಂದ ಅತ್ತೆ ಮಾವ ಕೊಂಕು ಮಾತನ್ನು ಆಡಿದ್ದರು. ಈ ಮಾತಿನಿಂದ ಬೇಸತ್ತು ಹೋಗಿದ್ದೆ. ಮತ್ತಷ್ಟು ಕೊಂಕು ಮಾತು ಆಡಿದ್ದರಿಂದ ಜಗಳ ವಿಕೋಪಕ್ಕೆ ತಿರುಗಿತು ಎಂದು ವೈದ್ಯೆ ಹೇಳಿರುವುದಾಗಿ ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಚಾಮರಾಜನಗರ | ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿಯ ಟಾರ್ಚರ್ – ಮನನೊಂದು ಪತಿ ಆತ್ಮಹತ್ಯೆ
ಬೆಂಗ್ಳೂರಲ್ಲಿ ಅತ್ತೆ, ಮಾವನ ಮೇಲೆ ಲೇಡಿ ಡಾಕ್ಟರ್ ಹಲ್ಲೆ – ರಾಕ್ಷಸ ರೂಪ ತಾಳಿದ ವೈದ್ಯೆಯ ವೀಡಿಯೊ ವೈರಲ್ #VictoriaHospital #Doctor #Crime #Bengalur pic.twitter.com/dyJjPQ8pGh
— PublicTV (@publictvnews) March 14, 2025
ಪೊಲೀಸರು ವಿಚಾರಣೆ ನಡೆಸಿದ ಬಳಿಕ ಎರಡು ಕಡೆಯವರಿಗೆ ಕೌನ್ಸಿಲಿಂಗ್ಗೆ ಹೋಗಿ ಸಮಸ್ಯೆ ಪರಿಹಾರ ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದಾರೆ.
ಏನಿದು ಪ್ರಕರಣ?
ಇಎಸ್ಐ ಆಸ್ಪತ್ರೆಯ ದಂತ ವೈದ್ಯ ನವೀನ್ ಕುಮಾರ್ ಮತ್ತು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ 2007ರಲ್ಲಿ ವಿವಾಹ ಆಗಿದ್ದರು. ದಂಪತಿ ಮಧ್ಯೆ ವೈಮನಸ್ಸು ಉಂಟಾಗಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 2015 ರಿಂದ ವೈದ್ಯ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ.
ಮಾರ್ಚ್ 10ರಂದು ರಾತ್ರಿ ಪ್ರಿಯದರ್ಶಿನಿ ಅವರು ವೃದ್ಧ ದಂಪತಿ ವಾಸವಾಗಿರುವ ಅನ್ನಪೂರ್ಣೇಶ್ವರಿ ನಗರದ ನಿವಾಸಕ್ಕೆ ಆಗಮಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಅತ್ತೆ, ಮಾವನೊಂದಿಗೆ ಪ್ರಿಯದರ್ಶಿನಿ ಜಗಳ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.