ಹಾಸನ: ದೇವಸ್ಥಾನಗಳಲ್ಲಿ ಭಕ್ತಿ ಭಾವದಲ್ಲಿರುವ ಭಕ್ತರು ಮೈಮರೆಯುವ ಮುನ್ನ ಸ್ವಲ್ಪ ಎಚ್ಚರವಾಗಿರಬೇಕು. ದೇವಸ್ಥಾನದಲ್ಲಿ ಬರುವ ಮಹಿಳೆಯರು ಭಕ್ತಿಯಲ್ಲಿ ಮೈಮರೆತ್ರೆ, ಇತ್ತ ಕಳ್ಳಿಯರು ತಮ್ಮ ಕೈಚಳಕ ತೋರುತ್ತಾರೆ. ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಭ ದೇವಸ್ಥಾನದಲ್ಲಿ ನಡೆದಿರುವ ಕಳ್ಳಿಯರ ಕೈಚಳಕದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹಾಸನ ಮೂಲದ ಭವ್ಯ ಎಂಬವರು ನಿಮಿಷಾಂಭ ದೇವಸ್ಥಾನದಲ್ಲಿ ದರ್ಶನ ಪಡೆದು ಕುಂಕುಮ ನೀಡುವ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಕಳ್ಳಿಯರು ತಮ್ಮ ಕರಾಮತ್ ತೋರಿಸಿದ್ದಾರೆ. ಸರದಿ ಸಾಲಿನಲ್ಲಿ ಬರುವಂತೆ ನಟಿಸಿರುವ ಕಳ್ಳಿಯರು ಭವ್ಯರನ್ನು ಹಿಂಬಾಲಿಸಿದ್ದಾರೆ. ಅರ್ಚಕರಿಂದ ಕುಂಕುಮ ಪಡೆಯುವ ನೆಪದಲ್ಲಿ ಬ್ಯಾಗ್ನಿಂದ ಪರ್ಸ್ನ್ನು ಕದ್ದು, ತನ್ನ ಸಹವರ್ತಿ ಕಳ್ಳಿಗೆ ನೀಡುತ್ತಾಳೆ. ಆ ಕಳ್ಳಿ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಮನೆಗೆ ಬಂಬ ಬಳಿಕ ಭವ್ಯ ತಮ್ಮ ಬ್ಯಾಗ್ನಲ್ಲಿ ಪರ್ಸ್ ಇಲ್ಲದೇ ಇರೋದನ್ನು ಗಮನಿಸಿದ್ದಾರೆ. ಪರ್ಸ್ ನಲ್ಲಿ ಮೂರು ಸಾವಿರ ರೂಪಾಯಿ ಹಣವಿದ್ದಿದ್ದು ಎಂದು ಸುಮ್ಮನಾಗುವಷ್ಟರಲ್ಲಿ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ಹಣ ಡ್ರಾ ಆಗಿದೆ ಅಂತಾ ಮೆಸೇಜ್ ಬಂತು.
ಇದನ್ನೂ ಓದಿ: ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ
ಸದ್ಯ ಎರಡು ಎಟಿಎಂ ಕಾರ್ಡ್ಗಳು ವೋಟರ್ ಐಡಿ ಜೊತೆಗೆ ಮೂರು ಸಾವಿರ ನಗದು ಕಳೆದುಕೊಂಡಿರುವ ಭವ್ಯ ಶ್ರೀರಂಗಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳಿಯರ ಕೈಚಳಕ ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ಕ್ರಮ ಕೈಗೊಂಡ್ರೆ ನಮ್ಮ ಹಣ ನಮಗೆ ಸಿಗುತ್ತೆ. ನಮಗೆ ನ್ಯಾಯ ಕೊಡಿಸಿ ಎಂದು ಭವ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.