ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ತೆಸ್ಪಿಯನ್ ಫಿಲ್ಮ್ಸ್ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನ ಹೊಸ ಶೈಲಿಯ ಚಿತ್ರಗಳಿಂದ ಇಂದಿನ ಯುವ ಸಮುದಾಯದ ಮನ ಗೆದ್ದಿರುವ ನಿರ್ದೇಶಕ ಚಿದಂಬರಂ ಮತ್ತು ಜೀತು ಮಾಧವನ್ ಜೊತೆಯಾಗಿ ಹೊಸ ಸಿನಿಮಾಗಾಗಿ ಸಾಥ್ ನೀಡಿದ್ದಾರೆ.
ತೆಸ್ಪಿಯನ್ ಫಿಲ್ಮ್ಸ್ ಸಂಸ್ಥೆಯ ರೂವಾರಿ ಶ್ರೀಮತಿ ಶೈಲಜಾ ದೇಸಾಯಿ ಜೊತೆಗೆ ಕೈ ಜೋಡಿಸಿರುವ KVN ಪ್ರೊಡಕ್ಷನ್ಸ್ನ ರೂವಾರಿ ವೆಂಕಟ್ ಕೆ. ನಾರಾಯಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಮಂಜುಮ್ಮಲ್ ಬಾಯ್ಸ್’ (Manjummel Boys) ನಿರ್ದೇಶಿಸಿದ್ದ ಚಿದಂಬರಂ ಜೊತೆಗೆ, ಇತ್ತೀಚೆಗೆ ಎಲ್ಲರ ಮನಗೆದ್ದಿದ್ದ ‘ಆವೇಶಮ್’ ಖ್ಯಾತಿಯ ನಿರ್ದೇಶಕ ಜಿತು ಮಾಧವನ್ ಈ ಹೊಸ ಯೋಜನೆಗೆ ಜೊತೆಯಾಗಲಿದ್ದಾರೆ.
ಅಷ್ಟೇ ಅಲ್ಲ ಈ ಚಿತ್ರದಲ್ಲಿ ನುರಿತ ತಂತ್ರಜ್ಞರ ದೊಡ್ಡ ಪಡೆಯೇ ಕೆಲಸ ಮಾಡಲಿದ್ದಾರೆ. ಛಾಯಾಗ್ರಹಣಕ್ಕೆ ಶೈಜು ಖಾಲೆದ್, ಸಂಗೀತ ನೀಡಲು ಸುಶಿನ್ ಶ್ಯಾಮ್ ಆಯ್ಕೆಯಾದರೆ ಎಡಿಟಿಂಗ್ ಜವಾಬ್ದಾರಿ ವಿವೇಕ್ ಹರ್ಷನ್ ಹೆಗಲಿಗೇರಿದೆ.
KVN ಪ್ರೊಡಕ್ಷನ್ಸ್ ಸಂಸ್ಥಾಪಕ ವೆಂಕಟ ಕೆ ನಾರಾಯಣ ಅವರು ಮಾತನಾಡಿ, ನಾವು ನಮ್ಮ ಸಂಸ್ಥೆಯಿಂದ ಭಿನ್ನ ಬಗೆಯ, ಸದಭಿರುಚಿಯ ಮನರಂಜನಾತ್ಮಕ ಸಿನಿಮಾಗಳನ್ನ ಕೊಡೋ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಅದರಂತೆ ಇಂಥ ಹೊಸ ಬಗೆಯ ಚಿಂತನೆಯುಳ್ಳ, ನಿರ್ದೇಶಕರಿಂದ ಜನರ ಮನರಂಜಿಸುವ ಕೆಲಸಕ್ಕೆ ಕೈ ಹಾಕಿರೋದೆ ಒಂದು ಮೈನವಿರೇಳಿಸೊ ಪ್ರಯತ್ನ. ಇಂತಹ ತಂಡದ ಜೊತೆಗೆ ಸಿನಿಮಾ ಮಾಡೋ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಮಗೆ ಹೆಮ್ಮೆ ತಂದಿದೆ.
ಒಂದು ಕಥೆಯನ್ನ ತೆರೆ ಮೇಲೆ ತರೊ ಪ್ರಕ್ರಿಯೆನೇ ರೋಮಾಂಚಕ. ನನ್ನಂತೆಯೇ ಒಳ್ಳೆಯ ಕಥೆಗೆ, ಸ್ಕ್ರಿಪ್ಟ್ಗೆ ಒತ್ತು ಕೊಡುವ ತಂಡದ ಜೊತೆ ಕೆಲಸ ಮಾಡ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆಯಾಗಿದೆ. ಸಿನಿಮಾ ಕೃಷಿಯ ಬಗ್ಗೆ ಇಷ್ಟೊಂದು ಗಾಢ ಪ್ರೀತಿಯುಳ್ಳ ತಂಡದ ಜೊತೆ ಕೆಲಸ ಮಾಡೋದೆ ಒಂದು ದೊಡ್ಡ ಖುಷಿ ಅಂತ ಅಭಿಪ್ರಾಯಪಟ್ಟರು.
KVN ಪ್ರೊಡಕ್ಷನ್ಸ್ ಪಾಲಿಗೆ 2025 ಸುವರ್ಣ ಸಮಯವಾಗಲಿದೆ. ಈಗಾಗಲೇ ಯಶ್ ಜೊತೆ ಟಾಕ್ಸಿಕ್, ತಮಿಳಿನ ದಳಪತಿ ಜೊತೆ ‘ತಳಪತಿ 69’ ಸಿನಿಮಾ, ಹಿಂದಿಯಲ್ಲಿ ಪ್ರಿಯದರ್ಶನ್ ಜೊತೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ, ಹಾಗೆಯೇ ಧ್ರುವ ಸರ್ಜಾ ಜೊತೆ ‘ಕೆಡಿ’ ಸಿನಿಮಾವಿದೆ. ಇದೀಗ ಮಲಯಾಳಂ ಚಿತ್ರರಂಗಕ್ಕೆ ಹೀಗೆ ನುರಿತರೊಂದಿಗೆ ಕಾಲಿಡ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಯೋಜನೆಗಳನ್ನ ಹಾಕಿಕೊಂಡಿರೋ ಸೂಚನೆ ಕೆವಿಎನ್ ಸಂಸ್ಥೆ ಕೊಡುತ್ತಿದೆ.