ಉಡುಪಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಏನೂ ಆಗಲ್ಲ. ಆದರೆ ಸರ್ಕಾರ ಮಾತ್ರ ಉಳಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ನಾನು ಸಾಯುತ್ತೇನೆ ಅಂತ ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು. ಸಾಯುತ್ತೇನೆ ಅಂದರೆ ಸರ್ಕಾರ ಸಾಯುತ್ತೆ ಹಾಗೂ ಅಧಿಕಾರ ಕಳೆದುಕೊಳ್ಳುತ್ತೇನೆ ಅಂಥ ಅರ್ಥ. ಜನರಲ್ಲಿ ಸಿಂಪಥಿ ಕ್ರಿಯೇಟ್ ಮಾಡಿಯಾದ್ರೂ ಸರ್ಕಾರ ಉಳಿಸುವ ಪ್ರಯತ್ನ ಅವರದ್ದು ಎಂದು ವ್ಯಂಗ್ಯವಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಏನೇ ಮಾಡಿದರೂ ರಾಜ್ಯ ಸರ್ಕಾರ ಬೇಗ ಸಾಯುತ್ತದೆ. ಮತ್ತೆ ಮುಂದೇನಾಗುತ್ತೋ ಆಮೇಲೆ ನೋಡೋಣ ಎಂದ ಸಂಸದರು, ರಾಜ್ಯದ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾದವರು ಈತರ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿ ಎಂದೆಂದಿಗೂ ಜನರ ಜೊತೆ ಇರುತ್ತದೆ ಎಂದು ಹೇಳಿದರು.
ಈ ಬಾರಿಯ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರವೇ ಎಚ್.ಡಿ.ಕುಮಾರಸ್ವಾಮಿ ಅವರ ಗಂಟಲಲ್ಲಿ ಸಿಕ್ಕಿಕೊಳ್ಳುತ್ತಿದೆ. ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ. ಕರಾವಳಿ ಜಿಲ್ಲೆಯಲ್ಲಿ ಬಂದ ಫಲಿತಾಂಶವೇ ಈ ಉಪಚುನಾವಣೆಯಲ್ಲಿ ಬರುತ್ತದೆ ಎಂದ ಸಂಸದ ನಳೀನ್ ಕುಮಾರ್ ಕಟೀಲ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಟೆಂಟ್ ಹಾಕಿದಷ್ಟು ಬಿಜೆಪಿಗೆ ಲಾಭವಾಗಲಿದೆ ಎಂದು ಲೇವಡಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv