ಜನಧನ್ ಖಾತೆಗಳಿಂದ 2 ರೂ.ನಂತೆ 6,000 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದೆ: ಎಚ್‍ಡಿಕೆ

Public TV
3 Min Read
KUMARASWAMY

-ಬಿಟ್ ಕಾಯಿನ್ ಆರೋಪಿಗೆ ಜಾಮೀನು ಸಿಕ್ಕಿದ್ದು ಹೇಗೆ?
-ಜಾಮೀನು ಖಾತರಿ ಕೊಟ್ಟವರು ಯಾರು?
-ಗಾಜಿನ ಮನೆಯಲ್ಲಿ ಕೂತು ಕಾಂಗ್ರೆಸ್ ಕಲ್ಲು ಹೊಡೆಯುತ್ತಿದೆ

ಬೆಂಗಳೂರು: ಜನಧನ್ ಖಾತೆಗಳಿಂದ ತಲಾ 2 ರೂಪಾಯಿ ಲೆಕ್ಕದಲ್ಲಿ ಸುಮಾರು 6,000 ಕೋಟಿ ರೂಪಾಯಿಯಷ್ಟು ಹಣವನ್ನು ಅಕ್ರವಾಗಿ ವರ್ಗಾವಣೆ ಮಾಡಿಕೊಂಡಿರುವ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.

ಜನತಾ ಪರ್ವ 1.0 ಎರಡನೇ ಹಂತದ ಕಾರ್ಯಗಾರ ಜನತಾ ಸಂಗಮದ ನಾಲ್ಕನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಷ್ಟು ಹಣದ ಅಕ್ರಮ ವರ್ಗಾವಣೆ ಹಿಂದೆ ಯಾರು ಇದ್ದಾರೆ ಎನ್ನುವ ಮಾಹಿತಿ ಜನರಿಗೆ ಗೊತ್ತಾಗಬೇಕಿದೆ. ಬಹುಶಃ ಈ ಎಲ್ಲ ಮಾಹಿತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಚೆನ್ನಾಗಿ ಗೊತ್ತಾಗಿದೆ. ಅವರ ಬಳಿ ಎಲ್ಲ ಮಾಹಿತಿ ಇದ್ದು, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ?: ಬಿಜೆಪಿ ಟ್ವೀಟ್ ವಾರ್

ಬಿಟ್ ಕಾಯಿನ್ ಆರೋಪಿಗೆ ಜಾಮೀನು ಸಿಕ್ಕಿದ್ದು ಹೇಗೆ?:
ಬಿಟ್ ಕಾಯಿನ್ ಹಗರಣದ ಮುಖ್ಯ ಆರೋಪಿಗೆ ಜಾಮೀನು ಸಿಕ್ಕಿದ ಬಗ್ಗೆ ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು, ಆರೋಪಿಗೆ ಜಾಮೀನು ಕೊಡಲು ಖಾತರಿ ಕೊಟ್ಟಿದ್ದು ಯಾರು? ಆತನ ಪರ ವಾದ ಮಂಡಿಸಿದ ವಕೀಲರು ಯಾರು? ಎಂದು ಪ್ರಶ್ನಿಸಿದರು.

ಆರೋಪಿ ಜೈಲಿನಿಂದ ಹೊರಬಂದ ನಂತರ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದಾನೆ. ಮಾಧ್ಯದವರ ಜೊತೆ ಆ ವ್ಯಕ್ತಿ ಮಾತನಾಡುತ್ತಾನೆ, ನಂತರ ಆಟೋ ಹತ್ತಿ ಹೋಗುತ್ತಾನೆ. ಇದೆಲ್ಲ ನೋಡಿದರೆ ಅದರ ಹಿಂದೆ ಯಾರೋ ಇರುವುದು ಸ್ಪಷ್ಟವಾಗಿದೆ. ಬಿಟ್ ಕಾಯಿನ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಸರ್ಕಾರದ ಪರ ವಕೀಲರು ಎಷ್ಟರ ಮಟ್ಟಿಗೆ ವಾದ ಮಂಡಿಸಿದ್ದಾರೆ ಎನ್ನುವುದೂ ಮುಖ್ಯ. ಇಲ್ಲಿ ಯಾರಿಂದ ಯಾರ ರಕ್ಷಣೆ ಆಗಿದೆ? ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು. ಇದನ್ನೂ ಓದಿ:  ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

ಹಗರಣ ತನಿಖೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೂಕ್ತ ತನಿಖೆ ಆಗಲಿ ಅಂತ ಅವರು ಪತ್ರ ಬರೆದಿರಬಹುದು. ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಒಳಗೊಂಡಿದ್ದಾರೆ ಎನ್ನುವ ಮಾತೂ ಇದೆ. ಪದೇ ಪದೆ ಹೀಗಾದರೆ ಜನ ಯಾರನ್ನು ನಂಬಬೇಕು. ಒಬ್ಬರಿಂದ ಜನರು ಎಲ್ಲಾ ರಾಜಕಾರಣಿಗಳ ಕಡೆ ಕೈ ತೋರಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭಾರತದ ಮಾನ ಹರಾಜು ಆಗಬಾರದು ಅಂತ ಒಂದಿಷ್ಟು ಜನರ ಮಾಹಿತಿಯನ್ನು ಹೊರಬಿಟ್ಟಿಲ್ಲ ಅಂತ ಕಾಣುತ್ತೆ. ಆದಷ್ಟು ಬೇಗ ಜನತೆಗೆ ಸತ್ಯ ತಿಳಿಯಲಿ. ಪ್ರಧಾನ ಮಂತ್ರಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಅವರಿಗೆ ಮುಜುಗರ ಅಗಿರುವ ಕಾರಣಕ್ಕೆ ಇಡೀ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು. ಇದನ್ನೂ ಓದಿ: ಬಿಟ್ ಕಾಯಿನ್ ಎಂದರೇನು? ನಮ್ಮಂತವರಿಗೆ ಸಿದ್ದರಾಮಯ್ಯನವರು ವಿವರಿಸಲಿ: ಪ್ರತಾಪ್ ಸಿಂಹ

ಗಾಜಿನ ಮನೆಯಲ್ಲಿ ಕೂತು ಕಾಂಗ್ರೆಸ್ ಕಲ್ಲು ಹೊಡೆಯುತ್ತಿದೆ:
ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುತ್ತಿದೆ. ಆ ಕಲ್ಲು ಯಾರಿಗೆ ಬೀಳುತ್ತದೆ? ಈಗಾಗಲೇ ಕಾಂಗ್ರೆಸ್ ನಾಯಕರಿಗೆ ಸಂಬಂಧಿಸಿದ ಕೆಲ ಹೆಸರುಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ, ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದರು. ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಾಕ್ಷಿ ಸಮೇತ ಹೋರಾಟ ಮಾಡಿದ್ದು ಜೆಡಿಎಸ್ ಮಾತ್ರ. ನಮ್ಮ ಹೋರಾಟದ ಫಲವಾಗಿ ಯಾರೆಲ್ಲ ಜೈಲಿಗೆ ಹೋದರು ಎನ್ನುವುದು ಜನತೆಗೆ ಗೊತ್ತಿದೆ ಎಂದರು.

ಸರ್ಕಾರ ಏನು ಮಾಡುತ್ತಿದೆ?:

ರಾಜ್ಯದಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ರೈತರು, ಸಾಮಾನ್ಯ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮಂತ್ರಿಗಳು, ಅಧಿಕಾರಿಗಳು ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಅವರಿಗೆಲ್ಲ ಯಾರು ಕೆಲಸ ಹೇಳುತ್ತಿದ್ದರೋ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವಂತ ಪರಿಸ್ಥಿತಿ ಇದೆ. ಯಾರೂ ಜನರ ಸಮಸ್ಯೆ ಆಲಿಸುತ್ತಿಲ್ಲ. ಆಡಳಿತ ಯಂತ್ರ ಕುಸಿಯುವ ಹಂತಕ್ಕೆ ಹೋಗುವುದರೊಳಗೆ ಅತ್ತ ಸರ್ಕಾರ ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ವ್ಯಕ್ತ ಮಾಡಿರುವ ಅಭಿಪ್ರಾಯವನ್ನು ಎಲ್ಲರೂ ಗಮನಿಸಬೇಕು. ಮುಖ್ಯ ಆಯುಕ್ತರನ್ನು ಜೈಲಿಗೆ ಕಲಿಸುವ ಎಚ್ಚರಿಕೆಯನ್ನು ನ್ಯಾಯಾಲಯ ಸರ್ಕಾರಕ್ಕೆ ನೀಡಿದೆ. ಇದೆಲ್ಲವನ್ನು ಸರ್ಕಾರ ಕೂಡಲೇ ಸರಿ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಇದನ್ನೂ ಓದಿ: ಬೊಮ್ಮಾಯಿ ಮಾತಾಡೋದು ನೋಡಿದ್ರೆ ಅನುಮಾನ ಬರ್ತಿದೆ: ಸಿದ್ದರಾಮಯ್ಯ 

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ ಗೌಡ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *