ಬೆಂಗಳೂರು: ಕೋಳಿ, ಕಜ್ಜಾಯ ಅಂದರೆ ರಾಜ್ಕುಮಾರ್ ಅವರ ಫ್ಯಾಮಿಲಿಯವರಿಗೆ ಬಹಳ ಇಷ್ಟ ಎಂದು ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಬೇಸರದಲ್ಲಿರುವ ಕುಮಾರ್ ಬಂಗಾರಪ್ಪ ಅವರು, ಪುನೀತ್ ಹಾಗೂ ಅಪ್ಪಾಜಿ ಅವರ ಜೊತೆಗೆ ಕಳೆದ ಕೆಲವು ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
ಪುನೀತ್ ಅಂತ್ಯಕ್ರಿಯೆ ನಂತರ ಮಾಧ್ಯಮದವರೊಂದಿಗೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಅಪ್ಪಾಜಿಯವರು ಶೂಟಿಂಗ್ ವೇಳೆ ಸಾಗರಕ್ಕೆ ಬಂದು ಉಳಿದುಕೊಳ್ಳುತ್ತಿದ್ದರು. ಅವರಿಗೆ ಜೋಗ ಜಲಪಾತ ಎಂದರೆ ಬಹಳ ಇಷ್ಟ. ಅಲ್ಲಿ ಕಾಡು ಸಹ ಇರುತ್ತಿತ್ತು. ಜೊತೆಗೆ ಅವರಿಗೆ ಅಲ್ಲಿ ನೆಂಟರು ಹಾಗೂ ಇಷ್ಟರು ಬಹಳಷ್ಟು ಮಂದಿ ಇದ್ದರು. ರಾಜ್ಕುಮಾರ್ ಅವರ ಮನೆತನಕ್ಕೆ ಹೆಚ್ಚಾಗಿ ಜೋಡಣೆಯಾಗಿರುವ ಬಂಧುಗಳೆಲ್ಲವೂ ಮಲೆನಾಡಿನ ಭಾಗದವರಾಗಿದ್ದು, ಅವರಿಗೆ ಈ ಭಾಗದ ಜನರಲ್ಲಿ ಬಹಳ ನಿಕಟವಾದ ಸಂಪರ್ಕವಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್ಗೆ ಹೇಳಿದ್ದೇನು?
ಇದೇ ವೇಳೆ ರಾಜ್ಕುಮಾರ್ ಅವರ ಮನೆತನದವರಿಗೆಲ್ಲರಿಗೂ ಬಹಳ ಪ್ರೀತಿ ಪಾತ್ರವಾದ ಪದಾರ್ಥ ಎಂದರೆ ಕೋಳಿ, ಕಜ್ಜಾಯ. ಕೋಳಿ ಕಜ್ಜಾಯದ ಸಾಂಬರ್, ಚಿಕನ್ ಫ್ರೈ ಎಂದರೆ ಅಪ್ಪಾಜಿ ಹಾಗೂ ಅವರ ಕುಟುಂಬಸ್ಥರಿಗೆಲ್ಲರಿಗೂ ಬಹಳ ಇಷ್ಟ. ಶೃತಿ ಸೇರಿದಾಗ ಸಿನಿಮಾದ ವೇಳೆ ಚಿ. ಉದಯ್ ಶಂಕರ್, ನಟಿ ಗೀತಾ, ಬಾಲಣ್ಣ, ಅಶ್ವತ್ ಎಲ್ಲರಿಗೂ ನಮ್ಮ ತಾಯಿ ಒಮ್ಮೆ ಕೋಳಿ ಕಜ್ಜಾಯ ಮಾಡಿ ಊಟ ಬಡಿಸಿದ್ದರು. ಇದೇ ವೇಳೆ ಚಿ. ಉದಯ್ ಶಂಕರ್ ಅವರು ಡೈನಿಂಗ್ ಟೇಬಲ್ ಮೇಲೆಯೇ ಬಿಸಿ, ಬಿಸಿ ಕಜ್ಜಾಯ ಹಾಡನ್ನು ಬರೆದರು. ಅದೇ ಹಾಡು ಹಾವಿನೆಡೆ ಸಿನಿಮಾದಲ್ಲಿ ಬರುತ್ತದೆ. ಈ ಎಲ್ಲವನ್ನು ನೆನಪಿಸಿಕೊಂಡಾಗ ಬಹಳ ದುಃಖವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.