ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಾಲ್ಯದಲ್ಲಿ ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುತ್ತೇನೆ ಎಂದು ಬಾಲ್ಯದ ಗೆಳೆಯ ಕುಳ್ಳ ನಾಗರಾಜ್ ನೆನಪಿನ ಬುತ್ತಿ ಬಿಚ್ಚಿಟ್ಟರು.
ಅಪ್ಪು ಅಗಲಿ ವಾರಗಳು ಕಳೆಯುತ್ತಿದ್ದರೂ, ಯಾರಿಗೂ ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಅವರ ಒಡನಾಡಿಗಳಿಗೆ ಅವರನ್ನು ಮರೆಯುವುದು ಸಾಧ್ಯವಿಲ್ಲ. ಪುನೀತ್ಗೆ ಬಾಲ್ಯದಲ್ಲಿ ಈಜು, ಬೈಸಿಕಲ್ ಹೊಡೆಯುವುದನ್ನ ಕಲಿಸಿದ್ದ ನಾಗರಾಜ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕೆರೆಯಲ್ಲಿ ಈಜು ಹೊಡೆಯುತ್ತಿದ್ದನು, ಮೀನು ಹಿಡಿಯುತ್ತಿದ್ದನು. ಬೀರಪ್ಪದೇವರ ಗುಡಿ ಬಳಿ ಮರಕೋತಿ ಆಟವಾಡುತ್ತಿದ್ದನು. ಇದನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ ಎಂದು ಅಪ್ಪು ಜೊತೆ ಕಳೆದ ಕೆಲವು ಮಧುರ ಕ್ಷಣಗಳನ್ನು ಹೇಳಿದರು.
ಗಾಜನೂರಿಗೆ ಬಂದಾಗಲೆಲ್ಲಾ ತಮ್ಮ ಮನೆಗೆ ಕರೆಸಿಕೊಂಡು ನನ್ನ ಜೊತೆ ಕಾಲ ಕಳೆಯುತ್ತಿದ್ದರು. ಅಕ್ಟೋಬರ್ 30ರಂದು ಗಾಜನೂರಿಗೆ ಬರುತ್ತೇನೆ ನನಗೆ ನಾಟಿಕೋಳಿ ಸಾಂಬಾರ್, ರಾಗಿಮುದ್ದೆ ಮಾಡಿಸಬೇಕೆಂದು ಹೇಳಿದ್ದರು. ಆದರೆ ಈಗ ಅವರು ಗಾಜನೂರು ಬದಲು ಬಾರದ ಲೋಕಕ್ಕೆ ಪಯಣಿಸಿದ್ದಾರೆ ಎಂದು ಭಾವುಕರಾದರು. ಇದನ್ನೂ ಓದಿ: ಹೆಣ್ಣು ಮಗು ಮಾರಾಟ ಮಾಡಿದ್ರಾ ಭಿಕ್ಷುಕ ದಂಪತಿ?
ನಾನು ಅವರನ್ನು ನೋಡಲು ಆಗಾಗ್ಗೆ ಬೆಂಗಳೂರಿಗೆ ಹೋಗುತ್ತಿದ್ದೆ. ನಾನು ಹೋದರೆ ಎಲ್ಲ ಕೆಲಸ ಬದಿಗೊತ್ತಿ ನನ್ನ ಜೊತೆ ಅಪ್ಪು ಕಾಲ ಕಳೆಯುತ್ತಿದ್ದರು. ನನ್ನನ್ನು ಅವರು ಬೈಸಿಕಲ್ ಖರೀದಿಸಲು ಕರೆದೊಯ್ದಿದ್ದರು. ಮನಸ್ಸಿಗೆ ಹಿಡಿಸದೆ ಮೂರು ಬೈಸಿಕಲ್ಅನ್ನು ಅವರು ಬದಲಾಯಿಸಿದ್ದರು. ಪುನೀತ್ ನಿಧನ ಈಗಲು ನನಗೆ ನಂಬಲಾಗುತ್ತಿಲ್ಲ. ಅವರು ಬೆಂಗಳೂರಿನಲ್ಲೇ ಇದ್ದಾರೆ ಎನಿಸುತ್ತದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.
ಸದ್ಯ ಗುಂಡ್ಲುಪೇಟೆಯಲ್ಲಿ ಟೆಂಪೋ ಚಾಲಕರಾಗಿರುವ ನಾಗರಾಜ್, ನನಗೆ ಹೊಸ ಟೆಂಪೋ ಕೊಡಿಸುವುದಾಗಿ, ಕೊಟೇಷನ್ ನ್ನು ಅಪ್ಪು ಹಾಕಿಸಲು ಹೇಳಿದ್ದರು. ಈ ಹಿನ್ನೆಲೆ ಟೆಂಪೋ ಖರೀದಿಗೆ 18 ಲಕ್ಷ ರೂ. ಕೊಟೇಷನ್ ಹಾಕಲಾಗಿತ್ತು ಎಂದರು. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ