ಮಂಗಳೂರು: ಪಾಪವನ್ನು ಕಳೆದು ವರವನ್ನು ಕರುಣಿಸಲು ನಾಗನ ರೂಪದಲ್ಲಿ ನಿಂತ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಷಷ್ಠಿ, ಚಂಪಾಷಷ್ಠಿಯಂತಹ ವಿಶೇಷ ದಿನ, ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು, ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತರು ತಾವು ತಂದ ಕಸವನ್ನು ಇಲ್ಲಿ ಎಸೆದು ಹೋಗುತ್ತಾರೆ. ಈ ಕಸ ನೇರವಾಗಿ ಸೇರುವುದು ಇಲ್ಲಿಂದ ಸ್ವಲ್ಪ ದೂರ ಇರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ. ಹೌದು ಇಲ್ಲೊಂದು ತ್ಯಾಜ್ಯ ವಿಲೇವಾಗಿ ಘಟಕವಿದೆ. ಈ ಘಟಕದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ಮರು ಬಳಕೆಯನ್ನು ಮಾಡಲಾಗುತ್ತೆ. ಆದರೆ ಈ ತ್ಯಾಜ್ಯ ವಿಲೇವಾರಿ ಘಟಕ ಇರೋದು ಅರಣ್ಯದ ಪಕ್ಕದಲ್ಲಿ. ಅರಣ್ಯದ ಸ್ವಲ್ಪ ದೂರದಲ್ಲಿ ಬಿಸಿಲೆ ರಕ್ಷಿತಾರಣ್ಯವಿರೋದ್ರಿಂದ ವನ್ಯಜೀವಿಗಳು ಇಲ್ಲಿಗೆ ನಿತ್ಯ ಆಗಮಿಸುತ್ತವೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇಡಲ್ಪಟ್ಟಿರುವ ಕಸವನ್ನು ತಿನ್ನುತ್ತವೆ. ಕಡವೆಗಳು, ಜಿಂಕೆಗಳು, ಮಂಗಗಳು ಹೀಗೆ ವಿವಿಧ ವನ್ಯಜೀವಿಗಳು ಇಲ್ಲಿ ಕಸವನ್ನು ತಿನ್ನವ ಪರಿಸ್ಥಿತಿ ಬಂದಿದೆ.
ಸುಬ್ರಹ್ಮಣ್ಯ ಪಂಚಾಯತ್ನಿಂದ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಿಸಲ್ಪಡುತ್ತದೆ. ಪಂಚಾಯತ್ನವರು ಕೂಡ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಈ ವಿಚಾರ ಗೊತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಷ್ಟೇ ಅಲ್ಲದೆ ಅರಣ್ಯಕ್ಕೆ ಫೆನ್ಸಿಂಗ್ ಹಾಕಿದರೆ ವನ್ಯ ಪ್ರಾಣಿಗಳು ಇತ್ತ ಬರಲಾಗದೇ ಕಸವನ್ನು ತಿನ್ನುವುದು ತಪ್ಪಿದಂತಾಗುತ್ತದೆ. ತ್ಯಾಜ್ಯ ಘಟಕಕ್ಕೆ ಒಂದು ಫೆನ್ಸಿಂಗ್ ಹಾಕಿದ್ದರೂ ಸಮಸ್ಯೆ ಬಗೆ ಹರಿಯುತ್ತದೆ ಆ ಕೆಲಸವನ್ನು ಕೂಡ ಪಂಚಾಯತ್ ಅಧಿಕಾರಿಗಳು ಮಾಡಿಲ್ಲ.
ಈ ಕುರಿತು ಅರಣ್ಯಾಧಿಕಾರಿಗಳನ್ನು ಕೇಳಿದರೆ, ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಅಲ್ಲಿನ ಸ್ಥಳೀಯ ಸಂಸ್ಥೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲದೇ ಆ ಜಾಗ ವೈಲ್ಡ್ ಲೈಫ್ ಫಾರೆಸ್ಟ್ ನ ಬದಿಯಲ್ಲಿದ್ದು, ಅದು ಅರಣ್ಯ ಜಾಗ ಹೌದಾ ಅಲ್ಲವಾ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುವ ಅವಶ್ಯಕತೆ ಇದೆ. ಮೊದಲಿಗೆ ಅಲ್ಲಿಗೆ ಭೇಟಿ ನೀಡಲು ವಲಯ ಅರಣ್ಯಾಧಿಕಾರಿಯವರಿಗೆ ಸೂಚಿಸುತ್ತೇನೆ ಎನ್ನುತ್ತಾರೆ.
ಎಲ್ಲಾ ವಿಚಾರಗಳು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳ ಗಮನದಲ್ಲಿ ಇದ್ದರೇ ಕೂಡ ಉತ್ತಮ. ಯಾಕಂದ್ರೆ ಅವರು ತರುವ ಪ್ಲಾಸ್ಟಿಕ್ ಮತ್ತಿತರ ಕಸವನ್ನು ಎಲ್ಲಂದರಲ್ಲಿ ಎಸೆದರೂ ಅದು ವನ್ಯಜೀವಿಗಳ ಹೊಟ್ಟೆ ಸೇರಲಿದೆ. ಆದ್ದರಿಂದ ಆದಷ್ಟು ಕಸವನ್ನು ಹೊರ ಹಾಕದಂತೆ ಎಚ್ಚರ ವಹಿಸಿದರೆ ಒಳ್ಳೆಯದು ಎಂದು ಪರಿಸರ ಪ್ರೇಮಿಗಳ ಮನವಿ ಮಾಡಿಕೊಂಡಿದ್ದಾರೆ.