ಬೆಂಗಳೂರು: ಸಾರಿಗೆ ವ್ಯವಸ್ಥೆ ಒಂದು ಗ್ರಾಮದ ಅಭಿವೃದ್ಧಿ ಸೂಚಕ ಅಂತಾರೇ, ಆದರೆ ಗ್ರಾಮಾಂತರ ಸರ್ಕಾರಿ ಬಸ್ಸುಗಳ ಕಥೆ ದೇವರೇ ಗತಿ ಎನ್ನುವಂತಿದೆ.
ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಹಳೆಯ ಕೆಎಸ್ಆರ್ಟಿಸಿ ಬಸ್ಸುಗಳ ಸಂಚಾರ ಹೆಚ್ಚಾಗಿದ್ದು, ಚಾಲಕ ನಿರ್ವಾಹಕರಿಂದ ಬಸ್ ತಳ್ಳಾಟ, ನೂಕಾಟ ಸಾಮಾನ್ಯವಾಗಿ ಬಿಟ್ಟಿದೆ. ದಿನನಿತ್ಯವೂ ಕೆಟ್ಟು ನಿಲ್ಲುವ ಸರ್ಕಾರಿ ಕೆಎಸ್ಆರ್ಟಿಸಿ ಬಸ್ಸುಗಳಿಂದ ಚಾಲಕ ನಿರ್ವಾಹಕರು ಹೈರಾಣಾಗಿದ್ದಾರೆ.
ಇದನ್ನೆಲ್ಲಾ ನೋಡಿದರೆ ಸಾರಿಗೆ ಇಲಾಖೆಯಲ್ಲಿ ಬಸ್ಸುಗಳ ನಿರ್ವಹಣೆಗೆ ಹಣವಿಲ್ಲವಾ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. ನೆಲಮಂಗಲ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗಳ ಪರದಾಟ ಹೇಳತೀರದಾಗಿದ್ದು, ಹಿಂದೆ ಮುಂದೆ ತಳ್ಳಿದರೂ ಸ್ಟಾರ್ಟ್ ಆಗದ ಬಸ್ಸುಗಳು ಇಲಾಖೆಗೆ ಹಾಗೂ ಪ್ರಯಾಣಿಕರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.
ಕೆಟ್ಟು ನಿಲ್ಲುವ ಬಸ್ಸುಗಳನ್ನು ಮತ್ತೊಂದು ಬಸ್ಸಿನ ಸಹಾಯ ಪಡೆದು ಸ್ಟಾರ್ಟ್ ಮಾಡಿ ಸಿಬ್ಬಂದಿ ಕೊಂಡಯ್ಯುತ್ತಿದ್ದಾರೆ. ಕೆಲವು ಬಸ್ಸುಗಳಂತೂ ಟ್ರಾಫಿಕ್ನಲ್ಲಿ ಕೆಟ್ಟು ನಿಲ್ಲುತ್ತಿದ್ದು ಪ್ರಯಾಣಿಕರು, ಸಾರಿಗೆ ಸಿಬ್ಬಂದಿ ಪರದಾಟವಂತಾಗಿದೆ.