ಬೆಂಗಳೂರು: ಇಷ್ಟು ದಿನ ರಾಜ್ಯಾದ್ಯಂತ ಜನರನ್ನು ಹೊತ್ತು ತಿರುಗುವ ಕೆಎಸ್ಆರ್ಟಿಸಿ ಬಸ್ (KSRTC Bus) ನೋಡಿದ್ದೀರಿ. ಇನ್ನು ಮುಂದೆ ಲಗೇಜ್ಗಳನ್ನು ಹೊತ್ತು ತಿರುಗಲು ಕೆಎಸ್ಆರ್ಟಿಸಿ ಲಾರಿಗಳು (KSRTC Lorry) ರಸ್ತೆಗಿಳಿಯಲಿವೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ತನ್ನ ವ್ಯಾಪ್ತಿಯಲ್ಲಿ ಇನ್ನಷ್ಟು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸದ್ಯ ಕೆಎಸ್ಆರ್ಟಿಸಿ ಅನೇಕ ಪ್ಲ್ಯಾನ್ಗೆ ಮುಂದಾಗುತ್ತಿದೆ. ಇದೇ ನಿಟ್ಟಿನಲ್ಲಿ ಸದ್ಯ ತನ್ನ ವ್ಯಾಪ್ತಿಯಲ್ಲಿ ಲಾರಿಗಳ ಬಳಕೆಗೆ ನಿಗಮ ತಯಾರಿ ನಡೆಸಿದ್ದು, ಇನ್ನು ಮುಂದೆ ಲಾರಿಗಳ ಮೂಲಕ ಲಗೇಜ್ಗಳನ್ನು ರಾಜ್ಯವ್ಯಾಪಿ ಸಾಗಣೆ ಮಾಡಲು ಚಿಂತನೆ ನಡೆಸಿದೆ.
ಇಷ್ಟು ದಿನ ಪ್ರಯಾಣಿಕರು ಸಂಚರಿಸುವ ಬಸ್ನಲ್ಲಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿತ್ತು. ಜೊತೆಗೆ ಕೆಲ ಖಾಸಗಿಯವರಿಗೆ ಕಾರ್ಗೋ ಸಾಗಣೆ ಟೆಂಡರ್ಗಳನ್ನು ನೀಡಿ ಅವರಿಂದ ವರ್ಷಕ್ಕೆ 28 ಕೋಟಿಯಷ್ಟು ಲಾಭವನ್ನು ಕೆಎಸ್ಆರ್ಟಿಸಿ ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಲಗೇಜ್ ಸಾಗಣೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಖುದ್ದು ಇನ್ನುಮುಂದೆ ತಾವೇ ಈ ಸೇವೆ ನೀಡಲು ನಿಗಮ ಪ್ಲ್ಯಾನ್ ಮಾಡಿದೆ. ಈ ಮೂಲಕ ಖಾಸಗಿಯವರಿಂದ ಬರುತ್ತಿದ್ದ 28 ಕೋಟಿ ರೂ. ಹಣದಿಂದ ಸಾಗಣೆ ಲಾಭವನ್ನು 100 ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಪ್ರಕ್ರಿಯೆ ಹೇಗೆ?
ಕೆಎಸ್ಆರ್ಟಿಸಿ ಲಾರಿಗೆ ಬಸ್ ಚಾಲಕರನ್ನೇ ಲಾರಿ ಚಾಲಕರನ್ನಾಗಿ ಮಾಡುವ ಸಾಧ್ಯತೆಯಿದೆ. ಇದಕ್ಕೆಂದು ಪ್ರತ್ಯೇಕ ನೇಮಕಾತಿ ಮಾಡುವ ಸಾಧ್ಯತೆ ಕಡಿಮೆಯಿದೆ. ಪಾರ್ಸೆಲ್ಗಳನ್ನು ಗ್ರಾಹಕರ ಮನೆ ಬಾಗಿಲಿಗೂ ತಲುಪಿಸಲು ಚಿಂತನೆ ನಡೆದಿದ್ದು, ಪ್ರತ್ಯೇಕ ಶುಲ್ಕ ವಿಧಿಸಿ, ಸೇವೆಗಳನ್ನು ಒದಗಿಸಲು ಕೆಎಸ್ಆರ್ಟಿಸಿ ಪ್ಲಾನ್ ಮಾಡಿದೆ.
ನಿಗಮದ ನಿಲ್ದಾಣಗಳಿಗೆ ಬಂದು ಬೀಳುವ ಪಾರ್ಸೆಲ್ಗಳನ್ನು ಸ್ಥಳೀಯ ಸಿಬ್ಬಂದಿ ಮೂಲಕ ಪೋರ್ಟರ್ ಮಾದರಿಯಲ್ಲಿ ಆಯಾ ಮನೆಗಳಿಗೆ ತಲುಪಿಸಲು ಪ್ಲಾನ್ ಇದೆ. ಅದಕ್ಕೆ ಪ್ರತ್ಯೇಕ ಶುಲ್ಕ ವಿಧಿಸುವ ಸಾಧ್ಯೆಯೂ ಇದೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ಓಡಾಡುವವರೇ ಎಚ್ಚರ – ಇಂದು ಕಾವೇರಿಗಾಗಿ ರೈತರಿಂದ ಬೃಹತ್ ಪ್ರತಿಭಟನೆ
ಈ ಸಂಬಂಧ ಈಗಾಗಲೇ ನಿಗಮಕ್ಕೆ ಪ್ರಾಥಮಿಕ ಹಂತವಾಗಿ 10 ಲಾರಿಗಳನ್ನು ತರಿಸಲಾಗಿದೆ. ಈ ಮೂಲಕ ರಾಜ್ಯದ ಹೆಚ್ಚು ಬೇಡಿಕೆಗಳಿಗೆ ಪ್ರಾರಂಭದಲ್ಲಿ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಸದ್ಯ ಈಗ ರಾಜ್ಯದೊಳಗಷ್ಟೇ ಸೇವೆ ನೀಡಲು ಕೆಎಸ್ಆರ್ಟಿಸಿ ಚಿಂತನೆ ನಡೆಸಿದೆ. ನಂತರದ ದಿನಗಳಲ್ಲಿ ರಾಜ್ಯದ ಹೊರ ಭಾಗಗಳಿಗೆ ಈ ಸೇವೆ ನೀಡೋ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿದ್ದು, ರಾಜ್ಯದೊಳಗೆ ಯಶಸ್ವಿಯಾದರೆ ಹೊರರಾಜ್ಯಗಳಿಗೂ ಸೇವೆ ವಿಸ್ತರಣೆಯಾಗಲಿದೆ. ಈ ಸೇವೆ ಇದೇ ಸೆಪ್ಟೆಂಬರ್ನಿಂದ ಆರಂಭವಾಗುವ ಸಾಧ್ಯತೆ ಇದ್ದು, ಸದ್ಯದಲ್ಲೇ ದರಗಳನ್ನು ಫಿಕ್ಸ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರು ಉತ್ತರ ಗೆಲ್ಲಲು ಡಿಕೆಶಿ ರಣತಂತ್ರ
Web Stories