ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ಕಬ್ಬು ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾಲಕ ಕಂಠಪೂರ್ತಿ ಕುಡಿದ ಅಮಲಿನಲ್ಲಿ ಯರ್ರಾಬಿರ್ರಿ ಲಾರಿ ಚಾಲನೆ ಮಾಡಿದ್ದಾನೆ. ಈ ವೇಳೆ ಅದೇ ಮಾರ್ಗವಾಗಿ ಬಂದ ಯಾದಗಿರಿಯಿಂದ ಸುರಪುರ ಕಡೆ ತೆರಳುತಿದ್ದ ಬಸ್ ನಲ್ಲಿ 70 ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು.
ಲಾರಿ ಚಾಲಕನ ವೇಗವನ್ನು ಗಮನಿಸಿದ ಕೆಎಸ್ಆರ್ ಟಿಸಿ ಚಾಲಕ ಬಸ್ಗೆ ಡಿಕ್ಕಿ ಹೊಡೆಯುವ ಮುನ್ನವೇ ಎಚ್ಚೆತ್ತು ಬಸ್ಸನ್ನು ರಸ್ತೆ ಪಕ್ಕ ನಿಲ್ಲಿಸಿದ್ದಾರೆ. ಈ ವೇಳೆ ಲಾರಿ ಬಸ್ ನ ಹಿಂಬಕ್ಕೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದ ಬಯಲಿಗೆ ನುಗ್ಗಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.
ತಕ್ಷಣ ಪ್ರಯಾಣಿಕರು ಹಾಗೂ ಸ್ಥಳೀಯರು ಲಾರಿ ಚಾಲಕನನ್ನು ಹಿಡಿದು ವಡಗೇರಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಚಾಲಕನ ಸಮಯ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದನ್ನೂ ಓದಿ: 60 ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಸಿಕ್ತು ಚಿನ್ನದ ಪದಕ!