ಶಿವಮೊಗ್ಗ: 10 ರೂಪಾಯಿ ಕೋಳಿ ಮರಿಗೆ ಕೆಎಸ್ಆರ್ಟಿಸಿ ಬಸ್ಸಿನ ನಿರ್ವಾಹಕರೊಬ್ಬರು 52 ರೂಪಾಯಿಗೆ ಅರ್ಧ ಟಿಕೆಟ್ ನೀಡಿದ್ದಾರೆ.
ಅಲೆಮಾರಿ ಕುಟುಂಬವೊಂದು ಶಿರಸಿಯಲ್ಲಿ 10 ರೂಪಾಯಿ ನೀಡಿ ಕೋಳಿ ಮರಿ ಖರೀದಿಸಿತ್ತು. ಶಿರಸಿಯಿಂದ ಹೊಸನಗರಕ್ಕೆ ಖಾಸಗಿ ಬಸ್ಸಿನಲ್ಲಿ ಬಂದಿಳಿದ ಅಲೆಮಾರಿ ಕುಟುಂಬ, ಹೊಸನಗರದಿಂದ ಶಿರೂರಿಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿತ್ತು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಂಪುಟದ 6 ಸಚಿವರಿಗೆ ಕೊಕ್?
ಈ ವೇಳೆ ಬಸ್ ನಿರ್ವಾಹಕರು ಕೋಳಿ ಮರಿಗೂ ಟಿಕೆಟ್ ಖರೀದಿಸಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಅಲೆಮಾರಿ ಕುಟುಂಬ ಕೋಳಿ ಮರಿಗಾಗಿ 52 ರೂಪಾಯಿ ಅರ್ಧ ಟಿಕೆಟ್ ನೀಡಿ ಶಿರೂರಿನಲ್ಲಿ ಇಳಿದಿದೆ.
ಅರ್ಧ ಟಿಕೆಟ್ ಕಡ್ಡಾಯ:
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಸಾಕು ಪ್ರಾಣಿ/ ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಬಹುದು. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು
ಪ್ರತಿಷ್ಠಿತ ಸಾರಿಗೆಗಳಾದ ಕರ್ನಾಟಕ ವೈಭವ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್ ಮತ್ತು ಎಲ್ಲಾ ರೀತಿಯ ಹವಾನಿಯಂತ್ರಿತ ಸಾರಿಗೆಗಳಲ್ಲಿ ಸಾಕು ಪ್ರಾಣಿ/ ಪಕ್ಷಿಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ.
ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಮಕ್ಕಳ ದರ ವಿಧಿಸಲಾಗುತ್ತದೆ. ನಾಯಿಯನ್ನು ಸೂಕ್ತವಾಗಿ ಚೈನಿನಿಂದ ಬಿಗಿದು, ವಾರಸುದಾರರ ಕಾಳಜಿಯೊಂದಿಗೆ ಕೊಂಡೊಯ್ಯಬಹುದು. ಸಾಕು ಪ್ರಾಣಿಗಳನ್ನು ಕೊಂಡೊಯ್ಯುವ ಪ್ರಯಾಣಿಕರು ಇತರೆ ಪ್ರಯಾಣಿಕರಿಗೆ ಅಥವಾ ನಿಗಮದ ಸಿಬ್ಬಂದಿಗಳಿಗೆ ಅಥವಾ ಲಗೇಜ್ಗೆ ಹಾನಿಯಾಗದ ರೀತಿ ಅಥವಾ ಇತರೆ ಪ್ರಯಾಣಿಕರ ವಸ್ತುಗಳಿಗೆ ತೊಂದರೆಯಾಗದಂತೆ ಹಾಗೂ ನಿಗಮದ ಆಸ್ತಿಗೆ ಹಾನಿಯಾಗದ ರೀತಿ ಕಾಳಜಿ ವಹಿಸತಕ್ಕದ್ದು ಎಂದು ಕೆಎಸ್ಆರ್ಟಿಸಿ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.