ರಾಯಚೂರು: ಕ್ಷೀರಭಾಗ್ಯ ಯೋಜನೆಯಡಿ ಶಾಲೆಗಳಿಗೆ ಹಾಲಿನ ಪುಡಿ ಸರಬರಾಜು ಮಾಡದೇ ಲಕ್ಷಾಂತರ ರೂ. ಗೋಲ್ಮಾಲ್ ಮಾಡಿರುವ ಪ್ರಕರಣ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಆಕಾಶ್ ಎಂ ಗಾಣಿಗ ಗೋಲ್ಮಾಲ್ ಮಾಡಿದ ಆರೋಪಿ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಸಮತೋಲನ ಆಹಾರ ನೀಡುವ ಉದ್ದೇಶದಿಂದ ಜಾರಿಗೆ ಬಂದ ಕ್ಷೀರಭಾಗ್ಯ ಯೋಜನೆ ರಾಯಚೂರಿನಲ್ಲಿ ಕಳ್ಳಕಾಕರಿಗೆ ಅನುಕೂಲವಾಗಿದೆ. ದೇವದುರ್ಗ ತಾಲೂಕಿನ ಶಾಲೆಗಳಿಗೆ ಕೆನೆಭರಿತ ಹಾಲಿನ ಪುಡಿ ಸರಬರಾಜು ಮಾಡಲು ಕೆಎಂಎಫ್ನಿಂದ ಗುತ್ತಿಗೆ ಪಡೆದಿದ್ದ ಆಕಾಶ್, ಹಾಲಿನ ಪುಡಿ ಸರಬರಾಜು ಮಾಡದೇ ಗೋಲ್ಮಾಲ್ ಮಾಡಿದ್ದಾನೆ. ತಾಲೂಕಿನ 14 ಶಾಲೆಗಳಿಗೆ 1,768 ಕೆಜಿ ತೂಕದ 5.10 ಲಕ್ಷ ರೂ. ಮೌಲ್ಯದ ಹಾಲಿನ ಪುಡಿಯನ್ನು ಸರಬರಾಜು ಮಾಡದೇ ವಂಚಿಸಿದ್ದಾನೆ.
- Advertisement 2
- Advertisement 3
ದೇವದುರ್ಗ ತಾಲೂಕಿನ ಜಾಡಲದಿನ್ನಿ, ಕಮದಾಳ, ಜಾಲಹಳ್ಳಿ, ಸಮುದ್ರ, ರಾಮದುರ್ಗ, ಮಲ್ಲಾಪುರ ಸೇರಿ 14 ಶಾಲೆಗಳ ಮುಖ್ಯೋಪಾಧ್ಯಾಯರ ಸಹಿ ನಕಲು ಮಾಡಿ, ನಕಲಿ ಸೀಲ್ ಬಳಸಿ, ನಕಲಿ ಸ್ವೀಕೃತಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ್ದಾನೆ. ಒಟ್ಟು 49,017 ಕೆಜಿ ತೂಕದ 1.41 ಕೋಟಿ ರೂ. ಮೌಲ್ಯದ ಹಾಲಿನ ಪುಡಿಯನ್ನು ಜುಲೈ, ಅಗಸ್ಟ್ ತಿಂಗಳ ಅವಧಿಯಲ್ಲಿ ಸರಬರಾಜು ಮಾಡಲು ಗುತ್ತಿಗೆ ನೀಡಲಾಗಿತ್ತು. ಆದರೆ 47,249 ಕೆಜಿ ಹಾಲಿನ ಪುಡಿಯನ್ನು ವಿವಿಧ ಶಾಲೆಗಳಿಗೆ ಸರಬರಾಜು ಮಾಡಿ 1,768 ಕೆಜಿ ಹಾಲಿನ ಪುಡಿಯನ್ನು ವಿತರಿಸದೇ ಗೋಲ್ಮಾಲ್ ಮಾಡಿದ್ದಾನೆ. ಒಕ್ಕೂಟ, ಅಕ್ಷರ ದಾಸೋಹ ಅಧಿಕಾರಿಗಳು ಹಾಗೂ 14 ಶಾಲಾ ಮುಖ್ಯೋಪಾಧ್ಯಾಯರು ಸಭೆ ನಡೆಸಿದಾಗ ಅಕ್ರಮ ಬಯಲಾಗಿದೆ. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ
- Advertisement 4
ವಿದ್ಯಾರ್ಥಿಗಳಲ್ಲಿ ಕಂಡುಬರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಿಸಲು, ದೈಹಿಕ ಹಾಗೂ ಮಾನಸಿಕವಾಗಿ ಮಕ್ಕಳನ್ನು ಸದೃಢಗೊಳಿಸಲು ಪ್ರೋಟಿನ್ ಮತ್ತು ಕೊಬ್ಬಿನಂಶಗಳನ್ನೊಳಗೊಂಡ ಸಮತೋಲಿತ ಆಹಾರ ನೀಡುವ ಉದ್ದೇಶದಿಂದ ಹಾಗೂ ರಾಜ್ಯದ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಜಾರಿಗೆ ಬಂದ ಕ್ಷೀರ ಭಾಗ್ಯ ಯೋಜನೆ ಕಳ್ಳಕಾಕರಿಂದ ಹಳ್ಳ ಹಿಡಿಯುತ್ತಿದೆ. ಇನ್ನೊಂದೆಡೆ ತಾಂತ್ರಿಕ ಸಮಸ್ಯೆಗಳನ್ನು ಹೇಳಿ ಜಿಲ್ಲೆಯ ಅಂಧ, ಅಂಗವಿಕಲ ಮಕ್ಕಳಿರುವ ವಿಶೇಷ ಶಾಲೆಗಳಿಗೆ ಅಧಿಕಾರಿಗಳು ಹಾಲಿನ ಪುಡಿ ಸರಬರಾಜು ಮಾಡುತ್ತಿಲ್ಲ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ
ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಟಿ.ತಿರುಪತೆಪ್ಪ ದೂರು ದಾಖಲಿಸಿದ್ದಾರೆ. ರಾಯಚೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಆಕಾಶ್ ಎಂ ಗಾಣಿಗ ವಿರುದ್ಧ ಪ್ರಕರಣ ದಾಖಲಾಗಿದೆ.