ಚಿತ್ರದುರ್ಗ: ಆರ್ಎಸ್ಎಸ್ ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೊಸದುರ್ಗ ಪಟ್ಟಣದಲ್ಲಿ ಎಚ್ಚರಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕು ಸ್ಥಾಪನೆ ನೆರೆವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರು ಹಾಗೂ ಇಂದಿರಾಗಾಂಧಿ ಆರ್ಎಸ್ಎಸ್ ಬಗ್ಗೆ ಮಾತನಾಡಿ ಅನುಭವಿಸಿದ್ದಾರೆ. ಹೀಗಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರಿಗೆ ಹೇಳಲು ಬಯಸುತ್ತೇನೆ. ಆರ್ಎಸ್ಎಸ್ ಬಗ್ಗೆ ಮಾತನಾಡೋದು ಬೆಂಕಿ ಜತೆ ಸರಸವಾಡಿದಂತೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ
ರಾಮನ ಬಗ್ಗೆ ರಾವಣನಿಗೆ ಎಲ್ಲಾ ಗೊತ್ತಿತ್ತು. ಆದರೆ ಶಿವಾಜಿ ಬಗ್ಗೆ ಔರಂಗಜೇಬ್ ಗೆ ಏನೂ ಗೊತ್ತಿರಲಿಲ್ಲ. ಹೀಗಾಗಿ ಅಂದು ಶಿವಾಜಿ ಹುಟ್ಟಿಲ್ಲದಿದ್ದರೆ ಈ ದೇಶದಲ್ಲಿ ಹಿಂದೂಗಳು ಯಾರು ಸಹ ಇರುತ್ತಿರಲಿಲ್ಲ. ಹಾಗೆಯೇ ಆರ್ಎಸ್ಎಸ್ ಇಲ್ಲದಿದ್ದರೆ ಯೋಚನೆ ಮಾಡಬೇಕಿತ್ತು. ಎಂದೋ ಈ ದೇಶ ಪಾಕಿಸ್ತಾನವೋ, ಇನ್ನೊಂದೆನೋ ಆಗುತ್ತಿತ್ತು. ಆದರೆ ಮುಸ್ಲಿಂ ಮತಕ್ಕಾಗಿ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ. ಅವರೊಂದಿಗೆ ಕ್ರೈಸ್ತರ ಸಭೆಗೆ ಹೋಗಿ ಅವರ ಸಂತೃಪ್ತಿಗೊಳಿಸಲು ಹೆಚ್ಡಿಕೆ ಸಹ ಅವರನ್ನು ಅನುಸರಿಸಿ ಕ್ರೈಸ್ತರನ್ನ ಓಲೈಸುವ ಮಾತನಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ಮತ್ತು ಕುಮಾರಸ್ವಾಮಿ ಅವರಿಗೆ ಹೇಳಬಯಸ್ತೀನಿ, ರಾಜಕೀಯದಲ್ಲಿ ಮಾಡಲು ಬೇಕಾದಷ್ಟು ವಿಚಾರಗಳಿವೆ. ಅದನ್ನ ಬಿಟ್ಟು ರಾಷ್ಟ್ರೀಯ ವಿಚಾರಗಳ ಬಗ್ಗೆ ರಾಜಕಾರಣ ಮಾಡೋದು ಬೇಡ. ಏಕೆಂದರೆ ಆರ್ಎಸ್ಎಸ್ ಯುವಕರಿಗೆ ರಾಷ್ಟ್ರೀಯ ವಿಚಾರ ಹಾಗು ಸಿದ್ಧಾಂತಗಳನ್ನು ತಿಳಿಸುತ್ತಿದೆ. ಸ್ವತಃ ಗಾಂಧೀಜಿ ಅವರೇ ಆರ್ಎಸ್ಎಸ್ ಕ್ಯಾಂಪಿಗೆ ಬಂದಿದ್ದರು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಆರ್ಎಸ್ಎಸ್ ನಡೆಯನ್ನ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು
ಈ ವೇಳೆ ಬಿಜೆಪಿಯನ್ನು ಕೊಲೆಗಡುಕ ಸರ್ಕಾರ ಎನ್ನುವ ಸಿದ್ದರಾಮಯ್ಯ ಅವರ ಸರ್ಕಾರ ಗೋ ಹತ್ಯೆ ನಿಷೇಧಕ್ಕಾಗಿ ಹೋರಾಡಿದ ಹಿಂದೂ ಯುವಕರನ್ನು ಕೊಲೆಗೈದಿದ್ದರು. ಆಕ್ಷಣವೇ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡಿದ್ರು. ಹೀಗಾಗಿ ಕೊಲೆಗಡುಕರು ಕಾಂಗ್ರೆಸ್ಸಿಗರು ಬಿಜೆಪಿ ಅವರು ಅಲ್ಲ ಎಂದು ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಪ್ಪ ಅವರ ಜೊತೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಇದ್ದರು.