ಬೆಂಗಳೂರು: ನಾನು ಪಕ್ಷಕ್ಕಾಗಿ 40 ವರ್ಷ ದುಡಿದಿದ್ದೇನೆ, ನನ್ನನ್ನು ಆದಷ್ಟು ಬೇಗ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಎಲ್ಲರೂ ಆಪಾದನೆ ನಿರಾಧಾರ ಅಂದಿದ್ದರು. ಕ್ಲೀನ್ ಚಿಟ್ ಬಂದರೆ ಮತ್ತೆ ಮಂತ್ರಿ ಮಾಡುತ್ತೇವೆ ಅಂದಿದ್ದರು. ಆದರೆ ಕ್ಲೀನ್ ಚಿಟ್ ಸಿಕ್ಕಿ ನಾಲ್ಕು ತಿಂಗಳಾಯ್ತು. ಇದುವರೆಗೆ ಮಂತ್ರಿ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಅವರು ಖಾಸಗಿ ಚಾನಲ್ನಲ್ಲಿ ಸಂದರ್ಶನ ಕೊಟ್ಟಿದ್ದಾಗ, ಅದರಲ್ಲಿ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಇಬ್ಬರಿಗೂ ಕ್ಲೀನ್ ಚಿಟ್ ಸಿಕ್ಕಿದೆ. ಇಬ್ಬರನ್ನೂ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದಷ್ಟು ಬೇಗ ನನ್ನನ್ನು ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಿ ಎಂದು ಮನವಿ ಮಾಡುತ್ತೇನೆ ಎಂದರು.
ನಲವತ್ತು ವರ್ಷ ಬಿಜೆಪಿ (BJP) ಕಟ್ಟಿದವನು ನಾನು. ಎಲ್ಲ ನಾಯಕರಿಗೆ ಪಕ್ಷದಿಂದ ಪ್ರತಿಫಲ ಸಿಕ್ಕಿದೆ. ನನಗೆ ಯಾಕೆ ಹೀಗೆ ಮಾಡ್ತಾರೆ ಪಕ್ಷದಿಂದ ಅಂತ ಗೊತ್ತಾಗ್ತಿಲ್ಲ. ನನಗೆ ಯಾಕೆ ಅನ್ಯಾಯ ಆಗ್ತಿದೆ ಅಂತ ಬಹಳ ಜನ ಕೇಳ್ತಾರೆ. ಈ ಬಗ್ಗೆ ಸಿಎಂ ಜತೆ ಮಾತಾಡುವ ಪ್ರಯತ್ನ ಮಾಡಿದೆ. ಅವರು ಕಲಾಪದಲ್ಲಿದ್ದಾರೆ ಅಂದ್ರು. ನಾನು ಸಿಎಂ ಅವರನ್ನು ನಂಬುತ್ತೇನೆ. ಸಿಎಂ ಅವರಿಂದ ಭರವಸೆ ಸಿಗದಿದ್ದರೆ ನನ್ನ ನಿಲುವು ಏನಾಗಿರ್ತಿತ್ತು ಅಂತ ನಾನು ಹೇಳಲ್ಲ ಎಂದರು.
ಅನಂತ್ ಕುಮಾರ್, ಯಡಿಯೂರಪ್ಪ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ರಾಜ್ಯಾದ್ಯಂತ ಬಿಜೆಪಿ ಬೆಳೆಸಲು ಪ್ರವಾಸ ಮಾಡಿದ್ದೆ ಎಂದು ತಮ್ಮ ರಾಜಕೀಯ ಪಯಣ ಬಗ್ಗೆ ಭಾವುಕತೆಯಿಂದ ಮಾತನಾಡಿದ್ದಾರೆ. ನಂಗೆ ಸಚಿವ ಆಗಬೇಕು ಅಂತ ಆಸೆ ಅಲ್ಲ. ಆಪಾದನೆ ಬಂದಿತ್ತು, ಅದರಿಂದ ಕ್ಲೀನ್ ಆಗಿ ಹೊರಬಂದಿದ್ದೇನೆ. ನನ್ನ ವಾಪಸ್ ಸಚಿವ ಮಾಡ್ತೀನಿ ಅಂತ ಬಿಎಸ್ವೈ, ಸಿಎಂ ಹಾಗೂ ಕಟೀಲ್ ಹೇಳಿದ್ರು. ಈಗ ಅದಕ್ಕಾಗಿ ಕೇಳುತ್ತಿದ್ದೇನೆ ಎಂದರು. ಇದನ್ನೂ ಓದಿ: ಸರ್ಕಾರಿ ಹಣದಲ್ಲಿ AAP ಜಾಹೀರಾತು – 97 ಕೋಟಿ ವಸೂಲಿಗೆ LG ಆದೇಶ
ಕಾಂಗ್ರೆಸ್ (Congress) ಹಿಂದುತ್ವದ ವಿರುದ್ಧ ಇದೆ. ಸಾವರ್ಕರ್ ವಿಚಾರ, ಕುಕ್ಕರ್ ಬಾಂಬ್ ಬಗ್ಗೆ ಅವರ ಹೇಳಿಕೆ ಗಮನಿಸಿದರೆ, ಕಾಂಗ್ರೆಸ್ ನೇರವಾಗಿ ಹಿಂದುತ್ವದ ವಿರುದ್ಧ ಚುನಾವಣೆಗೆ ಹೋಗ್ತಿದೆ. ಹಿಂದುತ್ವ ಉಳಿಸುವ ಬೆಳೆಸುವ ಕೆಲಸ ನಾವು ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ರಾಜಕೀಯ, ಖಾಸಗಿ ಜೀವನದ ಭವಿಷ್ಯಕ್ಕಾಗಿ ಆಶಿರ್ವಾದ ಪಡೆಯಲು ಮಠಕ್ಕೆ ಬಂದಿದ್ದೇನೆ : ಜನಾರ್ದನ ರೆಡ್ಡಿ