ಶಿವಮೊಗ್ಗ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕನಪುರದವರಾಗಿದ್ದಾರೆ. ಅವರು ಕಾಂಗ್ರೆಸ್ ಏಜೆಂಟ್ ಹಾಗೂ ಕಾಂಗ್ರೆಸ್ದಾಸ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರ ಜೊತೆ ಸೇರಿ ಸ್ವಾಮೀಜಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಮಿಷನ್ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಾಬೀತು ಪಡಿಸಲು ನಿಮ್ಮ ಬಳಿ ಒಂದೇ ಒಂದು ದಾಖಲೆ ಇದ್ದರೆ ಕೊಡಿ. ದಾರಿಯಲ್ಲಿ ಹೋಗುದ ದಾಸರೆಲ್ಲಾ ಆರೋಪ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ: ಕೋಮು ಗಲಭೆ ಉಂಟು ಮಾಡೋದು ಹಾಗೂ ಸರ್ಕಾರದ ವಿರುದ್ಧ ಪರ್ಸಂಟೇಜ್ ಬಗ್ಗೆ ಆರೋಪ ಮಾಡುವುದನ್ನು ಸಿದ್ದರಾಮಯ್ಯ, ಡಿಕೆಶಿ ಅವರು ದಿನ ಇದೇ ಉದ್ಯೋಗ ಮಾಡಿಕೊಂಡಿದ್ದಾರೆ. ಈ ರೀತಿಯಾಗಿ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನ ಅವರಿಗೆ ಈಗಾಗಲೇ ಬುದ್ಧಿ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಪಕ್ಷಕ್ಕೆ ಬೇಕಾದ ಸ್ಥಾನವು ಸಿಗಲ್ಲ ಎಂದು ಭವಿಷ್ಯ ನುಡಿದರು.
ಹಿಂದೂ ಸಂಘಟನೆ ಕಾನೂನು ಕೈತೆಗೆದುಕೊಳ್ಳಲ್ಲ: ಶಾಂತಿಯಿಂದ ಇದ್ದಂತಹ ರಾಜ್ಯವನ್ನು ಕೊಲೆ, ಗಲಭೆ ನಿರ್ಮಾಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಉಗ್ರವಾಗಿ ಖಂಡನೆ ಮಾಡುತ್ತೇನೆ. ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಪ್ರಚೋದನೆ ಮಾಡುವ ವಿಡಿಯೋ ನೋಡಿದ್ದೇನೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅವರು ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡೆದಿರುವುದನ್ನು ನೋಡಿದ್ದೇವೆ. ಪೊಲೀಸರನ್ನು ಹುಡುಕಿ ಕಲ್ಲು ಹೊಡೆದಿದ್ದಾರೆ. ಇದರಿಂದ ಇಡೀ ಹುಬ್ಬಳ್ಳಿಯಲ್ಲಿ ಅಶಾಂತಿ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಮುರ್ದಾಬಾದ್ ಘೋಷಣೆ ಕೂಗಿದ್ದಾರೆ. ಕಲ್ಲು ತೂರಾಟ ಮಾಡಿರುವ ಪುಂಡರಿಗೆ ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗೆ ಇದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳಲು ಹೋಗಲ್ಲ. ಆ ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ. ದೇಶದ್ರೋಹ ಮಾಡಿ, ಗೂಂಡಾಗಿರಿ ಮಾಡಿ ಓಡಿ ಹೋಗಿರುವ ರಾಷ್ಟ್ರ ದ್ರೋಹಿ ಮೌಲ್ವಿಯನ್ನು ಬಂಧಿಸುವಂತೆ ಪ್ರಧಾನಿ ಹಾಗೂ ಅಮಿತ್ ಶಾ ಅವರಲ್ಲಿ ಒತ್ತಾಯಿಸುತ್ತೇನೆ ಎಂದರು.
ಕಾಂಗ್ರೆಸ್ನಿಂದ ಮುಸ್ಲಿಮರ ಓಲೈಕೆ: ಕೊಲೆ ದೊಂಬಿಗಳಿಗೆ ಕಾರಣವಾಗುತ್ತಿರುವ ವ್ಯಕ್ತಿಗಳಿಗೆ, ಗೂಂಡಾಗಿರಿ ಮಾಡಿದ ಆರೋಪಿಗಳನ್ನು ಸಿಸಿ ಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ. ಕೊಲೆ ಮಾಡೋದು, ಅರೆಸ್ಟ್ ಆಗೋದು, ಬೇಲ್ ಮೇಲೆ ಹೊರಗೆ ಬರೋದು ಗೂಂಡಾಗಳಿಗೆ ಮಾಮೂಲಿ ಆಗಿದೆ. ಇದರ ಹಿಂದೆ ಯಾವ ವ್ಯಕ್ತಿ ಇದ್ದಾರೆ. ಯಾವ ಸಂಘಟನೆ ಇದೆ. ಯಾವ ಪಕ್ಷ ಇದೆ ಎನ್ನುವುದರ ಕುರಿತು ತುರ್ತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷ ಇದನ್ನು ಖಂಡನೆ ಮಾಡಲು ತಯಾರಿಲ್ಲ ಎಂದರು. ಇದನ್ನೂ ಓದಿ: ಇಂದು ಸಂಜೆಯೊಳಗೆ ಶರಣಾಗಿ – ನಾಪತ್ತೆಯಾಗಿರುವ 8 ಹುಬ್ಬಳ್ಳಿ ಪುಂಡರಿಗೆ ಡೆಡ್ಲೈನ್
ಕಲ್ಲಂಗಡಿ ಒಡೆದಿದ್ದಕ್ಕೆ ಬೊಬ್ಬೆ ಹಾಕುತ್ತಾರೆ. ಪೊಲೀಸ್ ಅಧಿಕಾರಿ ತಲೆ ಒಡೆದು ಹೋದರೂ ಡಿಕೆಶಿ, ಸಿದ್ದರಾಮಯ್ಯ, ಹೆಚ್ಡಿಕೆ ಮಾತನಾಡಲ್ಲ ಎಂದ ಅವರು, ಎಲ್ಲಾ ಮುಸಲ್ಮಾನರು ರಾಷ್ಟ್ರ ದ್ರೋಹಿಗಳು ಅಂತಾ ಕರೆಯಲ್ಲ. ಇಂತಹ ಕೃತ್ಯದಲ್ಲಿ ಭಾಗವಹಿಸಿದವರು ರಾಷ್ಟ್ರ ದ್ರೋಹಿಗಳು. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರನ್ನು ಓಲೈಕೆ ಮಾಡುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು
ಹುಬ್ಬಳ್ಳಿ ಗಲಭೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಹೊರಗೆ ಬರಲಿ. ನಾನು ಅದರ ಬಗ್ಗೆ ಮಾತನಾಡಲ್ಲ. ದೇವೆಗೌಡರೇ ಹೇಳಿದ್ದಾರೆ ಎಲ್ಲರ ಕಾಲದಲ್ಲೂ ನಡೆದಿದೆ ಅಂತಾ. ಜನಪರವಾದ ಕೆಲಸ ಮಾಡಿ ಜನ ಒಪ್ಪಿಕೊಳ್ಳುತ್ತಾರೆ. ಜನಪರವಾದ ಕೆಲಸ ಮಾಡಿ ಅಧಿಕಾರ ತೆಗೆದುಕೊಳ್ಳಿ. ಅದನ್ನು ಬಿಟ್ಟು ಕೋಮುಗಲಭೆ ಸೃಷ್ಟಿಸಿ ಅಧಿಕಾರ ಪಡೆಯುವ ಹವಣಿಕೆ ಬೇಡ ಎಂದರು.