ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿಯೇ ಅತ್ಯಂತ ಕುತಂತ್ರ ಮಾಡುವ ವ್ಯಕ್ತಿ ಎಂದರೆ ಅದು ಕೃಷ್ಣಬೈರೇಗೌಡ ಎಂದು ಅನರ್ಹ ಶಾಸಕ ಸೋಮಶೇಖರ್ ಹೇಳಿದ್ದಾರೆ.
ಸದನದಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರು ಕರ್ನಾಟಕ ರಾಜಕೀಯದಲ್ಲಿಯೇ ಅತ್ಯಂತ ಕುತಂತ್ರ ಮಾಡುವ (ಕನ್ನಿಂಗ್) ವ್ಯಕ್ತಿ. ಲೋಕಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಅವರನ್ನು ಸೋಲಿಸಿದ್ದಾರೆ ಎಂದು ಆರೋಪ ಮಾಡುತ್ತಾರೆ. ಇದು ಸುಳ್ಳು, ನಾವು ಎಂದಿಗೂ ಅಂತಹ ಯೋಚನೆ ಕೂಡ ಮಾಡಿರಲಿಲ್ಲ ಎಂದು ಹೇಳಿದರು.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡುವ ಚಿಂತನೆ ನಡೆಸಿದ್ದನೆ. ಈ ಸಂಬಂಧ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿ ದಿನಾಂಕ ನಿಗದಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸೋಮಶೇಖರ್ ಬಗ್ಗೆ ಕೃಷ್ಣಬೈರೇಗೌಡ ಹೇಳಿದ್ದು ಏನು? ಲೋಕಸಭೆಗೆ ಸ್ಪರ್ಧಿಸಿ ಕೃಷ್ಣಬೈರೇಗೌಡ ಸಾಲಗಾರನ್ನಾಗಿದ್ದು ಹೇಗೆ?
ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ನಿರೀಕ್ಷಿತ. ಯಾರನ್ನು ಅನರ್ಹಗೊಳಿಸುತ್ತಾರೆ, ಯಾವ ತೀರ್ಮಾನ ಮಾಡುತ್ತಾರೆ ಅಂತ ಮೊದಲೇ ಗೊತ್ತಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಟಾಟರ್ಜಿ ಪ್ರಕಾರವೇ ತೀರ್ಮಾನ ಬಂದಿದೆ. ಹೀಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇವು ಎಂದರು.
ನಾವು ಮುಂಬೈಗೆ ಹೋಗುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್ ಎಲ್ಲಾ ಶಾಸಕರು ವಿಷ ಕುಡಿಯುತ್ತಿದ್ದರೆ, ಮೈತ್ರಿ ಪಕ್ಷದ ಜೆಡಿಎಸ್ನ ಶಾಸಕರು ಅಮೃತ ಕುಡಿಯುತ್ತಿದ್ದರು. ಇದನ್ನು ನಾಯಕರ ಗಮನಕ್ಕೆ ತಂದಿದ್ದೇವು. ಆದರೆ ಅದನ್ನು ನಾಯಕರು ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳಲಿಲ್ಲ. ನಮ್ಮ ಅಸಮಾಧಾನ ವ್ಯಕ್ತ ಪಡಿಸಿದರೂ ಉಪಯೋಗ ಆಗಲಿಲ್ಲ. ಸಿಎಂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂದು ಕಿಡಿಕಾರಿದರು.
ವಿಧಾನಸಭೆಯಲ್ಲಿ ಅನೇಕ ನಾಯಕರು ನಮ್ಮ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಮಾಧ್ಯಮಗಳ ಮೂಲಕ ಉತ್ತರ ಕೊಡುತ್ತೇವೆ. ಬಳಿಕ ನಾನು ರಾಜಕೀಯದಿಂದ ದೂರ ಉಳಿಯುವ ನಿರ್ಧಾರಕ್ಕೆ ಬರಲಿದ್ದೇನೆ ಎಂದರು.