ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟಾಭಿಷೇಕ ಮಾಡಿ ಋಣ ಸಂದಾಯ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ಪಕ್ಷವನ್ನು ಕಷ್ಟ ಕಾಲದಲ್ಲಿ ಕೈ ಹಿಡಿದ ಡಿ.ಕೆ.ಶಿವಕುಮಾರ್ ಅವರಿಗೆ ಭರ್ಜರಿ ಗಿಫ್ಟ್ ಕೊಡುವುದು ಕೈ ಹೈಕಮಾಂಡ್ ನಾಯಕರ ನಿರ್ಧಾರವಾಗಿದೆ.
ಡಿಕೆ ಶಿವಕುಮಾರ್ ಅವರ ಋಣ ಸಂದಾಯಕ್ಕೆ ಹೈಕಮಾಂಡ್ ಮುಂದಾಗಲು ಅನೇಕ ಅಂಶಗಳು ಕಾರಣವಾಗಿವೆ. ಮಾಜಿ ಸಚಿವರು ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಏಕಾಂಗಿಯಾಗಿ ನೆರವಿಗೆ ನಿಂತಿದ್ದಾರೆ. ರಾಜ್ಯದಲ್ಲಿ ಉಪ ಚುನಾವಣೆಗಳು ನಡೆದಾಗಲೆಲ್ಲಾ ಏಕಾಂಗಿಯಾಗಿ ಉಪ ಚುನಾವಣೆ ಗೆದ್ದು ಪಕ್ಷದ ಗೌರವ ಕಾಪಾಡಿದ್ದಾರೆ. ವೈಯಕ್ತಿಕ ವೈಮನಸ್ಸಿನ ನಡುವೆಯೂ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆಗಾಗಿ ಶ್ರಮಿಸಿ ಸರ್ಕಾಕರದ ಉಳಿವಿಗೆ ಯತ್ನಿಸಿದ್ದರು. ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಪಕ್ಷಕ್ಕೆ ಸಂಪನ್ಮೂಲ ಕ್ರೋಡಿಕರಣಕ್ಕೆ ಸಹಕರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಹಿರಿಯ ಮುಖಂಡ ಅಹಮ್ಮದ್ ಪಟೇಲ್ ಅವರಿಗಾಗಿ ಗುಜರಾತ್ನ ಶಾಸಕರಿಗೆ ರಕ್ಷಣೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದರು. ಪಕ್ಷದ ಪರವಾಗಿ ನಿಂತು ಸಂಕಷ್ಟಕ್ಕೆ ಸಿಲುಕಿದರೂ ಡಿಕೆ ಶಿವಕುಮಾರ್ ಪಕ್ಷ ಹಾಗೂ ಪಕ್ಷದ ನಾಯಕರ ಹಿತ ಕಾಯ್ದಿದ್ದಾರೆ. ಪಕ್ಷದ ಸಂಘಟನೆ ದೃಷ್ಟಿಯಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗೆ ಕೆಪಿಸಿಸಿ ಪಟ್ಟವನ್ನು ಅವರಿಗೆ ನೀಡಲು ಸಾಲು ಸಾಲು ಕಾರಣಗಳು ಹೈಕಮಾಂಡ್ ಬಳಿ ಇವೆ ಎನ್ನಲಾಗುತ್ತಿದೆ.
ರಾಜ್ಯದ ಯಾವ ನಾಯಕರು ಏನು ಹೇಳಿದರೂ ಹೈ ಕಮಾಂಡ್ ಮನಸ್ಸು ಬದಲಿಸಿಲ್ಲ. ಈ ಮೂಲಕ ಡಿಕೆ ಶಿವಕುಮಾರ್ ಅವರ ಋಣ ಸಂದಾಯಕ್ಕೆ ಹೈಕಮಾಂಡ್ ಮುಂದಾಗಿದ್ದು, ಕೆಪಿಸಿಸಿ ಪಟ್ಟಾಭಿಷೇಕದ ಅಧಿಕೃತ ಘೋಷೇಯಷ್ಟೆ ಬಾಕಿ ಇದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.