ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಂದು ಕೂರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಆದರೆ ಈ ಯತ್ನಕ್ಕೆ ರಾಜ್ಯ ಕಾಂಗ್ರೆಸ್ನ ಎರಡು ಬಣಗಳು ಅಡ್ಡಗಾಲು ಹಾಕುತ್ತಿರುವ ಇಂಟರೆಸ್ಟಿಂಗ್ ಬೆಳವಣಿಗೆ ನಡೆಯುತ್ತಿದೆ.
ಡಿಕೆ ಶಿವಕುಮಾರ್ ಪಟ್ಟಾಭಿಷೇಕ ತಪ್ಪಿಸಲು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಣ ಮುಂದಾಗಿದೆ. ದಿನೇಶ್ ಗುಂಡುರಾವ್ ಅರಿಂದ ತೆರವಾದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಕೃಷ್ಣಬೈರೇಗೌಡ ಅವರ ಹೆಸರನ್ನು ಮುನ್ನಲೆಗೆ ತಂದಿದೆ. ಒಕ್ಕಲಿಗರ ಕೋಟದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಕೃಷ್ಣಬೈರೇಗೌಡ ಅವರು ಇರಲಿ. ಲಿಂಗಾಯತರ ಕೋಟದಲ್ಲಿ ನೀಡುವುದಾದರೆ ಎಂ.ಬಿ.ಪಾಟೀಲ್ ಇರಲಿ ಎನ್ನುವುದು ಸಿದ್ದರಾಮಯ್ಯ ಅವರ ಬಣ ಲಾಬಿ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಇತ್ತ ಮೂಲ ಕಾಂಗ್ರೆಸ್ಸಿಗರು ಲಿಂಗಾಯತರ ಕೋಟದಲ್ಲಿ ಈಶ್ವರ್ ಖಂಡ್ರೆ ಅಥವಾ ದಲಿತರ ಕೋಟವಾದರೆ ಕೆ.ಹೆಚ್.ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಲಾಬಿ ಆರಂಭಿಸಿದ್ದಾರೆ. ಎಲ್ಲರನ್ನೂ ಮೀರಿ ಡಿಕೆ ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತಾ ಅಥವಾ ಪ್ರತಿಬಾರಿಯಂತೆ ಈ ಬಾರಿಯೂ ಬಣ ರಾಜಕಾರಣದಿಂದಾಗಿ ಕೊನೆ ಗಳಿಗೆಯಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಪಟ್ಟದಿಂದ ವಂಚಿತರಾಗುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.