ತುಮಕೂರು: ಪುರಾವೆಗಳಿಲ್ಲದ ಹೇಳಿಕೆಗೆ ಅರ್ಥ ಇರಲ್ಲ. ಸೂಟ್ ಕೇಸ್ ತೆಗೆದುಕೊಂಡು ಹೋದ್ರೆ ಮಾತ್ರ ಕೆಲಸ ಎಂದು ಹೇಳಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಹಂಪಿ ವಿವಿ ಉಪಕುಲಪತಿ ಮಲ್ಲಿಕಾ ಘಂಟಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರು ಶುಕ್ರವಾರ ತುಮಕೂರಿನ ತಮ್ಮ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮಗಳ ಜೊತೆ ಪ್ರತಿಕ್ರಿಯೆ ನೀಡಿದರು.
ಮಲ್ಲಿಕಾಘಂಟಿ ಅವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಸೂಟ್ ಕೇಸ್ ತೆಗೆದುಕೊಂಡು ಹೋದ್ರೆ ಮಾತ್ರ ಕೆಲಸ ಎಂದು ಹೇಳಿರುವುದು ಸರಿಯಲ್ಲ. ಸೂಟ್ ಕೇಸ್ ಸಂಸ್ಕೃತಿ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು. ಯಾವಾಗ ಎಲ್ಲಿ ಯಾರಿಗೆ ಕೊಟ್ಟರು? ಯಾರು ಪಡೆದರು ಅಂತ ಸ್ಪಷ್ಟಪಡಿಸಲಿ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ವಿಚಾರದಲ್ಲಿ ಸಿಎಂ ಅಥವಾ ಪಕ್ಷದ ಯಾವುದೇ ಕೈವಾಡವಿಲ್ಲ. ಇದು ರಾಜಕೀಯ ಪಕ್ಷಗಳು ನಿರ್ಧರಿಸುವ ವಿಷಯವಲ್ಲ. ಧರ್ಮ ಗುರುಗಳು ಸಾಧುಸಂತರು ಚರ್ಚಿಸ ಬೇಕಾದ ವಿಚಾರ. ಹಾಗಾಗಿ ಕಾಂಗ್ರೆಸ್ ನ ಲಿಂಗಾಯತ ಮುಖಂಡರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ವಿನಾ ಕಾರಣ ಪಕ್ಷವನ್ನ ಮಧ್ಯ ಎಳೆಯಬೇಡಿ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಸೂಟ್ಕೇಸ್ ಕೊಟ್ರೆನೇ ಕೆಲಸ- ಹಂಪಿ ಕನ್ನಡ ವಿವಿ ಕುಲಪತಿ ಹೇಳಿಕೆ