-ಅಂಚೆ ಕೊಟ್ರೇಶ ಫೇಸ್ಬುಕ್ ಪೋಸ್ಟ್ ಗೆ ಸ್ಪಂದಿಸಿದ ಯುವಕರು
ಬಳ್ಳಾರಿ: ತಮಿಳು ನಟ ಧನುಷ್ ನಟಿಸಿರುವ ಬಿಟೆಕ್ ರಘುವರನ್ ಸಿನಿಮಾದಲ್ಲೊಂದು ಸೀನಿದೆ. ಫೇಸ್ಬುಕ್ ಮೂಲಕವೇ ಯುವಕರನ್ನೆಲ್ಲಾ ಸೇರಿಸಿ ಅಪಾರ್ಟ್ಮೆಂಟ್ ಕಾಮಗಾರಿಯನ್ನು ಕಂಪ್ಲೀಟ್ ಮಾಡಿದ ಸೀನ್ ಅದು. ಅದೇ ರೀತಿಯಲ್ಲಿ ಬಳ್ಳಾರಿಯಲ್ಲೊಬ್ಬರು ಫೇಸ್ಬುಕ್ ಮೂಲಕವೇ ಕೆರೆ ಕ್ರಾಂತಿಗೆ ಮುಂದಾಗಿದ್ದಾರೆ.
ಅಂಚೆ ಕೊಟ್ರೇಶ ಅಂತಾನೇ ಕರೆಸಿಕೊಳ್ಳುವ ಕೂಡ್ಲಗಿ ತಾಲೂಕಿನ ಕೊಟ್ಟೂರು ಪಟ್ಟಣದ ನಿವಾಸಿ ಕೊಟ್ರೇಶ ಅವರು 5 ವಾರಗಳ ಹಿಂದೆಯಷ್ಟೇ ಏಕಾಂಗಿಯಾಗಿ ಕರೆಯಲ್ಲಿನ ಜಾಲಿ ಮುಳ್ಳುಗಳನ್ನು ತೆರವು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಈ ಬಗ್ಗೆ ಪೇಸ್ಬುಕ್ನಲ್ಲಿ ನಮ್ಮ ಕೆರೆ ನಮ್ಮ ಹಕ್ಕು ಕೆರೆ ಕ್ಲೀನ್ ಮಾಡೋಕೆ ಬನ್ನಿ ಅಂತಾ ಮನವಿಯನ್ನೂ ಮಾಡಿದ್ದರು. ಇವರ ಫೇಸ್ಬುಕ್ ಪೋಸ್ಟ್ ಗೆ ಸ್ಪಂದಿಸಿದ ಯುವಕರು 700 ಎಕರೆಯಷ್ಟು ವಿಶಾಲವಾಗಿರುವ ಕೆರೆಗೆ ಮರು ಜೀವ ನೀಡೋ ಕಾಯಕಕ್ಕೆ ಕೈಜೋಡಿಸಿದ್ದಾರೆ.
ಇದುವರೆಗೆ ಕೆರೆಯ ತುಂಬಾ ಹರಡಿದ್ದ ಜಾಲಿ ಮುಳ್ಳನು ಖಾಲಿ ಮಾಡಲಾಗಿದೆ. ಜೆಸಿಬಿ ಮೂಲಕವೂ ಕೆರೆಯನ್ನು ಶುಚಿಗೊಳಿಸುವ ಕಾಯಕ ಸಾಗಿದೆ. ಜಿಲ್ಲಾಡಳಿತ ಕೂಡಾ ಜೊತೆಯಾದರೆ ಕೊಟ್ಟೂರು ಕೆರೆ ಮತ್ತೆ ಕೋಡಿ ಹೊಡೆಯೋದ್ರಲ್ಲಿ ಅನುಮಾನವೇ ಇಲ್ಲ.