ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ (Akhila Karnataka Brahmana Mahasabha) ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ (Mangaluru) ಚಿತ್ರಾಪುರ ಮಠದ ಸಹಕಾರದೊಂದಿಗೆ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞವನ್ನು ಅ.27ರಂದು ಮಂಗಳೂರಿನ ಕುಳಾಯಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆಯೋಜಿಸಿದೆ.
ಸಂವರ್ಧನೆ, ಸಂಘಟನೆ, ಸದೃಢ ರಾಷ್ಟ್ರ ಸ್ಥಾಪನೆ, ಬ್ರಹ್ಮ ತೇಜದ ಸಂವರ್ಧನೆ, ತನ್ಮೂಲಕ ಭಿನ್ನ ಪಥಗಳ, ಪಂಗಡಗಳ ಭೇದ ಮರೆತು ಬ್ರಾಹ್ಮಣರ ಐಕಮತ್ಯದ ಸಂಘಟನೆ ವಿಸ್ತರಿಸಿ ಸ್ವಸ್ಥ, ಸದೃಢ ಸಾಮರಸ್ಯದ ಸುಖ, ಶಾಂತಿ, ನೆಮ್ಮದಿಯ ವಿಶ್ವಗುರು ರಾಷ್ಟ್ರಸ್ಥಾಪನೆಯ ಗುರಿಯೊಂದಿಗೆ ಗಾಯತ್ರಿ ಸಂಗಮ ಕೈಗೊಳ್ಳಲಾಗಿದೆ.
ಕರಾವಳಿ ಸೇರಿದಂತೆ ದೇಶ-ವಿದೇಶದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣರು ಉಪಕರ್ಮದ ದಿನದಂದು ಸಂಕಲ್ಪ ದೀಕ್ಷೆ ತೆಗೆದುಕೊಂಡು ಗಾಯತ್ರಿ ಪಠಣ ಹಾಗೂ ಮಾತೆಯರು ಸರ್ವ ಮಂಗಲ ಮಾಂಗಲ್ಯೆ ಮಂತ್ರ ಪಠಣ ಆರಂಭಿಸಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಈಗಾಗಲೇ ಕೋಟಿ ಸಂಖ್ಯೆಯಲ್ಲಿ ಗಾಯತ್ರಿ ಹಾಗೂ ಸರ್ವಮಂಗಲ ಮಂತ್ರ ಪಠಣವಾಗಿದೆ. ಇದರ ಯಜ್ಞ ಪ್ರಕ್ರಿಯೆ ಅ.26, 27ರಂದು ನಡೆಯಲಿದ್ದು, ಸುಮಾರು 10 ಸಾವಿರ ಜನರು ಭಾಗವಹಿಸಲಿದ್ದಾರೆ. ಇದನ್ನೂ ಓದಿ: 5 ವರ್ಷಗಳ ಬಳಿಕ ಮುಖಾಮುಖಿ; ರಷ್ಯಾದಲ್ಲಿ ಮೋದಿ-ಜಿನ್ಪಿಂಗ್ ನಡ್ವೆ ದ್ವಿಪಕ್ಷೀಯ ಮಾತುಕತೆ
- Advertisement3
- Advertisement
ಶ್ರೀ ಕ್ಷೇತ್ರ ಚಿತ್ರಾಪುರದ ತಂತ್ರಿಗಳಾದ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಗಾಯತ್ರಿ ಯಜ್ಞ ನಡೆಯಲಿದೆ. ಹವ್ಯಕ, ಕೋಟ, ಕೋಟೇಶ್ವರ, ಕರ್ಹಾಡ, ಚಿತ್ಪಾವನ, ದೇಶಸ್ಥ, ಶಿವಳ್ಳಿ, ಸ್ಥಾನಿಕ ಅಲ್ಲದೆ ಬ್ರಾಹ್ಮಣ ಸಮಾಜದ ಎಲ್ಲ ಋತ್ವಿಜರು ಈ ಯಾಗದಲ್ಲಿ ಭಾಗವಹಿಸಿ ಪೂರ್ಣಾಹುತಿ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಈ ಯಾಗದ ಪೂರ್ವಭಾವಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಬ್ರಾಹ್ಮಣ ಸಮುದಾಯದ ಎಲ್ಲ ಜ್ಞಾನಿಗಳು, ವಿದ್ವಾಂಸರು, ವಿಪ್ರರು, ಮುಂದಾಳುಗಳು, ಹಿರಿಯರು, ಯುವ ಸಮುದಾಯ, ಮಕ್ಕಳು, ಮಹಿಳೆಯರನ್ನು ಸಂಪರ್ಕಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಾಲಯಗಳ ಅರ್ಚಕರು, ಜಿಲ್ಲೆಯ ಎಲ್ಲ ಪುರೋಹಿತರು, ಸಹಾಯಕ ಪುರೋಹಿತರು, ಸಂಸ್ಕೃತ ಶಿರೋಮಣಿಗಳು, ವೇದಜ್ಞರು ಬೆಂಬಲ ಸೂಚಿಸಿದ್ದು, ಯಾಗದಲ್ಲಿ ಭಾಗವಹಿಸಲಿದ್ದಾರೆ. ಈ ಯಾಗದ ಮೂಲಕ ಇಡೀ ಬ್ರಾಹ್ಮಣ ಸಮುದಾಯವನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನ ಇದಾಗಿದೆ. ಇದನ್ನೂ ಓದಿ: ಸಿಇಟಿ ಕಾಲೇಜಿಗೆ ವರದಿ ಮಾಡಿಕೊಳ್ಳದ 2,348 ಅಭ್ಯರ್ಥಿಗಳಿಗೆ ಶೋಕಾಸ್ ನೋಟಿಸ್ – ಕೆಇಎ
ಕಾರ್ಯಕ್ರಮದ ವಿವರ ಹೀಗಿದೆ:
ಅ.26ರಂದು ಬೆಳಗ್ಗೆ 8:30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರಾರ್ಥನೆ, ಗೋಪೂಜೆ, ಗಣಪತಿ ಹೋಮ, ದುರ್ಗಾ ಹೋಮ, ರುದ್ರ ಹೋಮ, ಕೃಷ್ಣ ಮಂತ್ರ ಹೋಮ, ಪವಮಾನ ಹೋಮ, ನಾಗದೇವರಿಗೆ ಅಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಯುವ ಘಟಕದ ನೇತೃತ್ವದಲ್ಲಿ ಆದಿತ್ಯ ಯುವ ಸಂಗಮ-ಹಳೆ ಬೇರು ಹೊಸ ಚಿಗುರು ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಸಿಂಹ ಭಾಗವಹಿಸಲಿದ್ದಾರೆ. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಧ್ಯಾಹ್ನ 1ರಿಂದ ಗಾಯತ್ರಿ ಮಹಾತ್ಮೆ ಯಕ್ಷಗಾನ ತಾಳಮದ್ದಳೆ, ಸಂಜೆ 3:30ರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕದ ನೇತೃತ್ವದಲ್ಲಿ ವೇದ ಮಾತಾ ಗಾಯತ್ರೀ-ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ ನಡೆಯಲಿದೆ. ಸಂಜೆ 5:30ರಿಂದ ಕಲಶ ಪ್ರತಿಷ್ಠೆ, ಅರಣೀ ಮಥನ, ಅಷ್ಟಾವಧಾನ ಯಜ್ಞ ಮಂಟಪದಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪ್ರತಿಮಾ ಶ್ರೀಧರ್ ಅವರಿಂದ ನೃತ್ಯಾಮೃತ, ಕೆಮ್ಮಣ್ಣು ಸಹೋದರಿಯರಾದ ಶರಣ್ಯಾ ಮತ್ತು ಸುಮೇಧಾ ಅವರಿಂದ ಗಾನಾಮೃತ ನಡೆಯಲಿದೆ.
ಅ.27ರಂದು ಏಕ ಬೃಹತ್ ಯಜ್ಞಕುಂಡದಲ್ಲಿ ಗಾಯತ್ರಿ ಯಜ್ಞ ಆರಂಭಗೊಂಡು 10:30ಕ್ಕೆ ಯಜ್ಞದ ಪೂರ್ಣಾಹುತಿ ನಡೆಯಲಿದೆ. 11 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಮಹಾಸಭಾದ ಅಧ್ಯಕ್ಷರು ಹಾಗೂ ಕೋಟಿ ಗಾಯತ್ರಿ ಜಪಯಜ್ಞ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹಾಗೂ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸತ್ಪ್ರಚೋದನೆಗಾಗಿ ಶಕ್ತಿ ಕೇಂದ್ರವಾದ ಸೂರ್ಯ ರಶ್ಮಿಯನ್ನು ಧ್ಯಾನಿಸಿ ಎಲ್ಲರಿಗೂ ಯಾವಾಗಲೂ ಒಳಿತಾಗಲೆಂದು ಪ್ರಾರ್ಥಿಸುವ ಮನುಕುಲದ ಪ್ರಾರ್ಥನೆಯಾದ ಗಾಯತ್ರಿ ಮಂತ್ರವು ವೇದಮಾತಾ ಎಂದು ಪ್ರಸಿದ್ಧವಾಗಿದೆ. ನಾಲ್ಕೂ ವೇದಗಳಲ್ಲೂ ಈ ಮಂತ್ರ ಕಾಣಸಿಗುತ್ತದೆ. ಈ ಮಂತ್ರಾನುಷ್ಠಾನವನ್ನು ನಿರಂತರವಾಗಿ ಬ್ರಾಹ್ಮಣ್ಯ ಮಾಡುತ್ತಾರೆ. ಇಂತಹ ಬ್ರಾಹ್ಮಣರ ಸಂಘಟನೆ, ಉಳಿವು ಮತ್ತು ಬ್ರಾಹ್ಮಣ್ಯದ ಉಳಿವಿಗಾಗಿ ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮತೇಜದ ಬೆಳಕಲಿ ಎಂಬ ಧ್ಯೇಯವಾಕ್ಯದೊಂದಿಗೆ ಲೋಕಹಿತಾಕಾಂಕ್ಷಿಗಳಾಗಿ ಕೋಟ್ಯಧಿಕ ಗಾಯತ್ರಿ ಮಂತ್ರಾನುಷ್ಠಾನವನ್ನು ಸಾಂಘಿಕವಾಗಿ ನಡೆಸಿ ಗಾಯತ್ರಿ ಯಜ್ಞ ಸಂಪನ್ನಗೊಳಿಸುವ ಕಾರ್ಯಕ್ರಮವೇ ಈ ಗಾಯತ್ರಿ ಸಂಗಮವಾಗಿದೆ.