ಚಿಕ್ಕಬಳ್ಳಾಪುರ: ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ಕೋಟ್ಯಧಿಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನವಾದ ಕೋಟ್ಯಧಿಪತಿ ಹೆಸರು ಕೋಟೇಶ್ವರರಾವ್. ಈತ ದೊಡ್ಡ ದೊಡ್ಡ ಬಂಗ್ಲೆ ಕಟ್ಟಿದ್ದು, ಕಲ್ಯಾಣ ಮಂಟಪ ಕಟ್ಟಿಸುತ್ತಿದ್ದ. ಆದ್ರೆ ಕೂಲಿ ಕೆಲಸ ಮಾಡ್ತಿದ್ದವ ಕಲ್ಯಾಣ ಮಂಪಟ ಕಟ್ಟುವುದಕ್ಕೆ ದುಡ್ಡು ಎಲ್ಲಿಂದ ಬರುತ್ತೆ ಎಂದು ಅರೆಸ್ಟ್ ಮಾಡಿದಾಗ ಪೊಲೀಸರಿಗೆ ಗೊತ್ತಾಗಿದ್ದು ಆತನ ಅಕ್ರಮ ಸಂಪಾದನೆಯ ಹಾದಿ. ಹೀಗಾಗಿ ನಕಲಿ ಗಣಿ ಪರವಾನಿಗೆ ಹಾಗೂ ಅನುಮತಿ ಪತ್ರ ತಯಾರಿ ಮಾಡ್ತಿದ್ದ ಖದೀಮನನ್ನ ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ – ಸುಳಿವು ಕೊಟ್ಟ ಸಂಜಯ್ ರಾವತ್
ಯಾರಿದು?
ಮೂಲತಃ ಆಂಧ್ರದ ಲೇಪಾಕ್ಷಿ ಮೂಲದ ಕೋಟೇಶ್ವರರಾವ್ ಕ್ವಾರಿಯೊಂದರಲ್ಲಿ ಕೂಲಿ ಕೆಲಸಕ್ಕೆ ಬಾಗೇಪಲ್ಲಿಗೆ ಬಂದಿದ್ದ. ಆದರೆ ಕೂಲಿ ಕೆಲಸ ಮಾಡ್ತಿದ್ದ ಕೋಟೇಶ್ವರರಾವ್ ಬಾಗೇಪಲ್ಲಿ ಪಟ್ಟಣದ 5ನೇ ವಾರ್ಡಿನಲ್ಲಿ ಎರಡು ಬೃಹತ್ ಕಟ್ಟಡಗಳು, ಹಾಗೂ ಕಾರಕೂರು ಕ್ರಾಸ್ ಬಳಿ ಕೋಟಿ ಕೋಟಿ ಕೊಟ್ಟು ಜಮೀನು ಖರೀದಿ ಮಾಡಿದ್ದಲ್ಲದೇ ಬೃಹತ್ ಕಲ್ಯಾಣ ಮಂಟಪ ಕಟ್ಟುತ್ತಿದ್ದಾನೆ.
ಏನು ಅಕ್ರಮ?
ಕೂಲಿ ಕೆಲಸ ಮಾಡ್ತಿದ್ದವ ಇಷ್ಟೊಂದು ಆಸ್ತಿ ಹೇಗೆ ಮಾಡೋಕೆ ಸಾಧ್ಯನಾ ಅಂತ ಕೋಟೇಶ್ವರರಾವ್ ಬೆನ್ನುಬಿದ್ದ ಪೊಲೀಸರಿಗೆ ಅವನ ಅಕ್ರಮ ಸಂಪಾದನೆಯ ಹಾದಿ ಗೊತ್ತಾಗಿದೆ. ಕೂಲಿ ಕೆಲಸಕ್ಕೆ ಅಂತ ಬಂದ ಕೋಟೇಶ್ವರರಾವ್ ಕೂಲಿ ಕೆಲಸದ ಜೊತೆ ಜೊತೆಗೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಕಲಿ ಗಣಿ ಪರ್ಮಿಟ್ಸ್ ಹಾಗೂ ಲೈಸೆನ್ಸ್ ತಯಾರಿ ಮಾಡುವುದನ್ನು ಕರಗತ ಮಾಡಿಕೊಂಡಿದ್ದ.
ಕದ್ದು ಮುಚ್ಚಿ ಕಳೆದ 10 ವರ್ಷಗಳಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಗಣಿ ಇಲಾಖೆಯ ನಕಲಿ ಪರವಾನಿಗೆ ಹಾಗೂ ಪರ್ಮಿಟ್ಸ್ಗಳನ್ನ ಸೃಷ್ಟಿಸಿ ಮೂರು ರಾಜ್ಯಗಳಿಗೆ ವಂಚನೆ ಮಾಡ್ತಿದ್ದ. ಇದ್ರಿಂದ ಕೋಟಿ, ಕೋಟಿ ಸಂಪಾದನೆ ಮಾಡಿ ಬಾಗೇಪಲ್ಲಿಯಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್ಸ್ ಕಟ್ಟುತ್ತಿದ್ದ. ಆದ್ರೆ ಬಾಗೇಪಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಇವನ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ತಯಾರಿಸಿದ್ದ ನಕಲಿ ಪರವಾನಿಗೆ-ಪರ್ಮಿಟ್ಸ್ ಪತ್ರಗಳು ಹಾಗೂ ತಯಾರಿಗೆ ಬಳಸಲಾಗುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ಹಾಗೂ ಹಾಲೋಗ್ರಾಂ ತಯಾರಿಕಾ ಯಂತ್ರವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸತೀಶ್ ಪಾಟೀಲ್ ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ 32ಕ್ಕೆ ಏರಿಕೆ
ಹತ್ತಕ್ಕೂ ಹೆಚ್ಚು ವರ್ಷಗಳಿಂದಲೂ ಕೋಟೇಶ್ವರರಾವ್ ಗಣಿ ಇಲಾಖೆಯ ನಕಲಿ ಪರವಾನಿಗೆ ಪರ್ಮಿಟ್ಸ್ ಸೃಷ್ಟಿ ಮಾಡುತ್ತಿದ್ರೂ ಎಲ್ಲಿಯೂ ಸಿಕ್ಕಿ ಹಾಕಿಕೊಂಡಿರಲಿಲ್ಲ. ಆದ್ರೆ ಈಗ ಬಾಗೇಪಲ್ಲಿ ಪೊಲೀಸರು ಈ ಖತರ್ನಾಕ್ ಖದೀಮನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.