ಉಡುಪಿ: ಕೊರೊನಾ ಲಾಕ್ಡೌನ್ ಬಿಸಿ ಎಲ್ಲಾ ಕ್ಷೇತ್ರಕ್ಕೆ ತಟ್ಟಿದೆ. ಅದರಲ್ಲೂ ತಟ್ಟೆ ಕಾಣಿಕೆ ನಂಬಿರುವ ಹಳ್ಳಿಯ ದೇವಸ್ಥಾನದ ಅರ್ಚಕರ ಸ್ಥಿತಿ ಕೇಳೋದೇ ಬೇಡ. ರಾಜ್ಯದ ಮುಜರಾಯಿ ಇಲಾಖೆ ಇದೀಗ ರಾಜ್ಯದ ದೇವಸ್ಥಾನಗಳ ಅರ್ಚಕರು ಸಂಕಷ್ಟಕ್ಕೆ ಪರಿಹಾರ ಕೊಡಲು ಮುಂದಾಗಿದೆ.
ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಸಾವಿರ ಅರ್ಚಕರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ದಿನಸಿ ಕಿಟ್ ವಿತರಿಸಲಾಗುವುದು ಎಂದರು.
ಅರ್ಚಕರಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ. ಹಣಕಾಸಿನ ವ್ಯವಸ್ಥೆ ಮಾಡಲು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಡುವೆ ರಾಜ್ಯದ 210 ಎ ದರ್ಜೆ ದೇವಸ್ಥಾನಗಳಲ್ಲಿ ಏಳು ಲಕ್ಷ ಜನರಿಗೆ ನಿತ್ಯ ಊಟ ವಿತರಿಸಲಾಗುತ್ತಿದೆ. ದಕ್ಷಿಣ ಕನ್ನಡದ ಕದ್ರಿ ದೇವಸ್ಥಾನದಲ್ಲಿ 12 ಸಾವಿರ ಊಟದ ವ್ಯವಸ್ಥೆ ಪ್ರತಿದಿನ ನಡೆಯುತ್ತಿದೆ. ಕೊರೊನಾ ನಿಯಂತ್ರಿಸಲು ಎಲ್ಲರೂ ಒಟ್ಟಾಗಿ ಒಂದಾಗಿ ಕೆಲಸ ಮಾಡಬೇಕು ಎಂದರು.
ದೇವಸ್ಥಾನಗಳು ಆಯಾ ವ್ಯಾಪ್ತಿಯ ಬಡ ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದರು. ಕೊರೊನಾ ಲಾಕ್ಡೌನ್ನಿಂದ ಸ್ಥಗಿತಗೊಂಡಿರುವ ನಿತ್ಯ ಪೂಜೆ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಹೇಳಿದರು.