ಚಿಕ್ಕಮಗಳೂರು: ರಾಜ್ಯದಲ್ಲಿ ನಡೆದ ಸಾಲು-ಸಾಲು ದರೋಡೆ ಪ್ರಕರಣಗಳ ವಿಚಾರವಾಗಿ ಸರ್ಕಾರದ ವಿರುದ್ಧ ಸಂಸದ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಪೊಲೀಸರನ್ನು ಯಕ್ಷಗಾನ ತಡೆಯುವುದಕ್ಕೆ ನಿಯೋಜನೆ ಮಾಡುವುದು ಬೇಡ. ಸಿ.ಟಿ ರವಿ (C.T Ravi) ಅವರನ್ನು ಪೊಲೀಸರ ಮೂಲಕ ಊರೆಲ್ಲಾ ತಿರುಗಿಸಿ ಏನೋ ಸಾಧನೆ ಮಾಡಿದ್ದೇವೆ ಎಂಬ ಭ್ರಮೆ ಬೇಡ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದಲ್ಲಿ ಆಂತರಿಕ ಕಚ್ಚಾಟ ಇದ್ರೆ ಪಕ್ಷದ ಮೇಲೆ ಮಾತ್ರ ಪರಿಣಾಮ ಬೀರುತ್ತೆ. ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಇರಬಾರದು. ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಜೋರಾದ್ರೆ ಜನರಿಗೆ ತೊಂದರೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ನಲ್ಲಿ (Congress) ಒಂದು ಕಡೆ ಟಗರು ಮತ್ತೊಂದು ಕಡೆ ಬಂಡೆ ಗುದ್ದಾಡ್ತಾ ಇದ್ರೆ ಜನರಿಗೆ ತೊಂದರೆ ಆಗುತ್ತೆ. ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹದ ಬಗ್ಗೆ ಇಂದು ಅಥವಾ ನಾಳೆ ಎಲ್ಲವೂ ಕೂಡ ಸರಿ ಹೋಗಲಿದೆ ಎಂದಿದ್ದಾರೆ.