ಕೊಪ್ಪಳ: ಹಿಂದುಳಿದ ನಾಯಕ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನು ಮಾಡಲು ಮತ್ತು ಬಿ.ಎಸ್ ಯಡಿಯೂರಪ್ಪ ಅವರ ಮಾನಸ ಪುತ್ರ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗುರು ಅವರನ್ನು ಸಚಿವರನ್ನಾಗಿ ಮಾಡಲು ಕೊಪ್ಪಳ ಜನತೆ ಒತ್ತಾಯಿಸಿದ್ದಾರೆ.
ಶಾಸಕ ಬಸವರಾಜ ದಡೆಸೂಗುರು ಅವರಿಗೆ ಸಚಿವರ ಸ್ಥಾನ ನೀಡಲು ಒತ್ತಾಯಿಸಿ ಇಂದು ಕನಕಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಸವರಾಜ ದಡೆಸೂಗುರು ಅಭಿಮಾನಿಗಳು ಘೋಷಣೆ ಕೂಗೂವ ಮೂಲಕ ಒತ್ತಾಯ ಮಾಡಿದರು.
ವಿಧಾನಸಭೆ ಚುನಾವಣೆ ವೇಳೆ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ್ದ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕನಕಗಿರಿ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಬಸವರಾಜ ದಡೆಸೂಗುರು ಅವರನ್ನು ನೀವು ಆಯ್ಕೆ ಮಾಡಿ ಶಾಸಕರನ್ನಾಗಿ ಕಳುಹಿಸಿ ನಾನು ಅವರಿಗೆ ಉನ್ನತ ಸ್ಥಾನವನ್ನು ನೀಡುತ್ತೇನೆ ಎಂದು ಸಚಿವ ಸ್ಥಾನ ನೀಡುವ ಬಗ್ಗೆ ಕ್ಷೇತ್ರದ ಜನರಿಗೆ ಸುಳಿವು ನೀಡಿದ್ದರು.
ಇಂದು ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ಕ್ಷೇತ್ರದ ಜನತೆಯಲ್ಲಿ ಅಂದು ಯಡಿಯೂರಪ್ಪ ನೀಡಿದ್ದ ಭರವಸೆ ಚಿಗುರೊಡೆದಿದೆ. ಯಡಿಯೂರಪ್ಪ ಅವರು ಅಂದು ಕೊಟ್ಟ ಮಾತಿನಂತೆ ನಮ್ಮ ಶಾಸಕರಿಗೆ ಇಂದು ಸಚಿವ ಸ್ಥಾನ ನೀಡಲಿ ಎಂದು ಕ್ಷೇತ್ರದ ಜನತೆ ಒತ್ತಾಯ ಮಾಡುತ್ತಿದ್ದಾರೆ. ಇದರ ಜೊತೆಗೆ ಈ ಭಾಗದ ಹಿಂದುಳಿದ ನಾಯಕರಾದ ಬಿ.ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ಸಹ ಒತ್ತಾಯ ಮಾಡಿದ್ದಾರೆ.