ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಗವಿಸಿದ್ದೇಶ್ವರ (Gavi Siddeshwar) ಜಾತ್ರಾಮಹೋತ್ಸವದಲ್ಲಿ ಭಕ್ತರ ಸಾಗರದ ಜಯಘೋಷದ ನಡುವೆ ಗವಿಸಿದ್ದೇಶ್ವರ ಮಹಾರಥೋತ್ಸವ ಜರುಗಿತು.
ಪಡುವಣದಲ್ಲಿ ಕೆಂಪಾದ ಸೂರ್ಯ ಮೋಡದಲ್ಲಿ ಮರೆಯಾಗುವ ವೇಳೆಗೆ ಸಂಜೆ ಬರೋಬ್ಬರಿ 5:50ಕ್ಕೆ 209ನೇ ಗವಿಸಿದ್ದೇಶ್ವರ ರಥೋತ್ಸವಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿಂದೂಸ್ತಾನಿ ಗಾಯಕ ಪಂಡಿತ್ ಡಾ.ವೆಂಕಟೇಶ ಕುಮಾರ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಷಟಸ್ಥಲ ಧ್ವಜ ಏರುತ್ತಿದ್ದಂತೆಯೇ ಲಕ್ಷಾಂತರ ಭಕ್ತರು `ಗವಿಸಿದ್ದೇಶ್ವರ ಮಹಾರಾಜಕೀ ಜೈ’ ಎಂದು ಘೋಷಣೆ ಕೂಗುವ ಮೂಲಕ ರಥ ಎಳೆದರು. ಭಕ್ತ ಸಾಗರದ ನಡುವೆ ಮಹಾರಥ ರಾಜ ಗಾಂಭೀರ್ಯದಲ್ಲಿ ಮುಂದೆ ಸಾಗಿತು. ರಥದ ಸುತ್ತಲೂ ಸೇರಿದ್ದ ನಾಡಿನ ನಾನಾ ಭಾಗದಿಂದ ಬಂದಿದ್ದ ಭಕ್ತರು ರಥೋತ್ಸವ ಸಾಗುವ ದೃಶ್ಯ ಭಕ್ತಿ ಭಾವದಿಂದ ಕಣ್ತುಂಬಿಕೊಂಡರು. ರಥದ ಕಳಶಕ್ಕೆ ಉತ್ತತ್ತಿ ಎಸೆಯುವ ಮೂಲಕ ಧನ್ಯತೆ ಮೆರೆದರು.ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ `ಐಐಟಿ ಬಾಬಾ’ – ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದವ ಈಗ ಸಾಧು
ರಥ ಕೇವಲ 5 ನಿಮಿಷದಲ್ಲಿ ಪಾದಗಟ್ಟೆ ತಲುಪಿ, 6:05ಕ್ಕೆ ಮಹಾರಥ ಸ್ವಸ್ಥಾನಕ್ಕೆ ಬಂತು ನಿಂತಿತು. ರಥ ಮೂಲ ಸ್ಥಾನದಲ್ಲಿ ನಿಲ್ಲುತ್ತಿದ್ದಂತೆಯೇ ಭಕ್ತರು ಜಯ ಘೋಷ ಮೊಳಗಿಸಿ, ಚಪ್ಪಾಳೆ ತಟ್ಟುವ ಮೂಲಕ ಸಂತೋಷ ವ್ಯಕ್ತಪಡಿಸಿದರು. ಮಹಾರಥೋತ್ಸವದ ಮುಂದೆ ನಂದಿ ಕೋಲು ಸೇರಿ ಸಾಂಪ್ರದಾಯಿಕ ಕಲಾ ತಂಡಗಳು ಭಕ್ತರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದ್ದವು.
ಮೊದಲು ಗವಿಮಠದ ಗದ್ದುಗೆಯಿಂದ ಉತ್ಸವ ಮೂರ್ತಿಯನ್ನು ಭಕ್ತಗಣದ ನಡುವೆ ಮಹಾರಥೋತ್ಸವಕ್ಕೆ ತರಲಾಯಿತು. ನಂದಿ ಕೋಲು ಸೇರಿ ನಾನಾ ಸಾಂಪ್ರದಾಯಿಕ ಕಲಾ ತಂಡಗಳು ಸಾಥ್ ನೀಡಿದ್ದವು. ನಂತರ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಭಾರಿ ಬಂದೋಬಸ್ ಲ್ಲಿ ಮಹಾರಥೋತ್ಸವದ ಬಳಿಗೆ ತೆರಳಿ, ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದರು. ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾ ಸ್ವಾಮೀಜಿ ಸೇರಿ ನಾಡಿನ ನಾನಾ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ಹಾಲಪ್ಪ ಆಚಾರ, ಬಸವರಾಜ ದಡೆಸುಗೂರ, ಡಿಸಿ ನಲಿನ್ ಅತುಲ್, ಎಸ್ಪಿ ಡಾ.ರಾಮ್.ಎಲ್.ಅರಸಿದ್ದಿ, ನಿಟಟಪೂರ್ವ ಎಸ್ಪಿ ಯಶೋಧ ವಂಟಗೋಡಿ ಸೇರಿ ಇತರರು ಇದ್ದರು.ಇದನ್ನೂ ಓದಿ: ಜುಕರ್ಬರ್ಗ್ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್ ದುಬೆ