ಕೊಪ್ಪಳ: ದಲಿತ ಬಾಲಕನೊಬ್ಬ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಂಡ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಐವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ಸೆ.4ರಂದು ನಾಲ್ಕು ವರ್ಷದ ಪುಟ್ಟ ಬಾಲಕನ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ ಪೋಷಕರೊಂದಿಗೆ ಈತ ದೇವಸ್ಥಾನ ಪ್ರವೇಶ ಮಾಡಿದ್ದನು. ಇದನ್ನು ವಿರೋಧಿಸಿದ ಮಿಯಾಪುರ ಗ್ರಾಮದ ಸವರ್ಣಿಯರು ದಲಿತ ಬಾಲಕನ ಕುಟುಂಬಕ್ಕೆ 11 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಮಾನವೀಯತೆಯನ್ನು ಮರೆತಿತ್ತು.
ಇದರ ವಿರುದ್ಧ ಅನ್ಯಾಯಕ್ಕೆ ಒಳಗಾದ ಸಮುದಾಯ ಪ್ರತಿಭಟನೆಯನ್ನು ಮಾಡಿತ್ತು. ಇದರ ಭಾಗವಾಗಿ ಇತ್ತಿಚೆಗೆ ಅಧಿಕಾರಿಗಳು, ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆ ಮಾಡಿದ್ರು. ಇಷ್ಟೆಲ್ಲ ವಿಷಯ ಗಂಭೀರವಾಗಿದ್ರೂ ಬಾಲಕನ ತಂದೆ ದೂರು ಕೊಡಲು ನಿರಾಕರಣೆ ಮಾಡಿದ್ದರು. ಈ ಹಿನ್ನಲೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಎಂಬವರು ದೂರು ದಾಖಲು ಮಾಡಿದ್ದರು. ಇದನ್ನೂ ಓದಿ: ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!
ಕನಕಪ್ಪ ಪೂಜಾರಿ, ಹನಮಗೌಡ, ಗವಿ ಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ ಶರಣಗೌಡ, ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.