ಕೊಪ್ಪಳ: ಜಿಲ್ಲಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ (National Lok Adalat) ನಲ್ಲಿ ಒಟ್ಟು 5,340 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮಹಾಂತೇಶ ಎಸ್ ದರಗದ ಮಾಹಿತಿ ನೀಡಿದರು.
ಕೊಪ್ಪಳದ (Koppal) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.14 ರಂದು ಜಿಲ್ಲಾ ನ್ಯಾಯಾಲಯ ಸೇರಿ ಜಿಲ್ಲಾದ್ಯಂತ ವಿವಿಧ ಕಡೆ ಆಯೋಜಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ರಾಜೀ ಸಂಧಾನದ ಮೂಲಕ ಒಟ್ಟು 5,340 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದರು.ಇದನ್ನೂ ಓದಿ: ಜೈಲಧಿಕಾರಿಗಳ ಕೈಗೆ ತಡವಾಗಿ ತಲುಪಿದ ಜಾಮೀನು ಪ್ರತಿ – ಪವಿತ್ರಾ ಗೌಡಗೆ ಇಂದೂ ಜೈಲೇ ಗತಿ
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ.ಚಂದ್ರಶೇಖರ ಅವರ ಮುತುವರ್ಜಿಯಿಂದ ಜಿಲ್ಲೆಯಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣ, ಜನನ-ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ ಇತ್ಯರ್ಥ ಮಾಡಲಾಯಿತು. ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯ ಸೇರಿ 7,006 ಪ್ರಕರಣಗಳ ಪೈಕಿ 5340 ಪ್ರಕರಣಗಳ ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.
ದಾಖಲೆ ಪ್ರಮಾಣದ ಹಣ ವಸೂಲಾತಿ: ವಿಮೆ, ನೀರಿನ ಬಿಲ್, ಮೋಟಾರ್ ವಾಹನ ಅಪಘಾತ ಸೇರಿ ವಿವಿಧ ಪ್ರಕರಣ ಇತ್ಯರ್ಥ ಮಾಡಿ, ಒಟ್ಟು 37,85,04,906 ರೂ. ಸಂಬಂಧಿಸಿದವರಿಗೆ ಕೊಡಿಸಲಾಗಿದೆ. ಪೂರ್ವ ದಾವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 48,637 ಪ್ರಕರಣಗಳ ಪೈಕಿ 41,801 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇತ್ಯರ್ಥವಾದ ಒಟ್ಟು ಮೌಲ್ಯ 2,05,86,528 ರೂ. ಆಗಿದೆ. ಒಟ್ಟಾರೆ ಒಂದೇ ದಿನದಲ್ಲಿ ಒಟ್ಟು 55,643 ಪ್ರಕರಣದ ಪೈಕಿ 47,141 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಒಟ್ಟು ಮೌಲ್ಯ 39,92,01,241 ಇರುತ್ತದೆ ಎಂದು ತಿಳಿಸಿದರು. ರಾಜೀ ಸಂಧಾನದ ಮೂಲಕ ಇಬ್ಬರೂ ಪಕ್ಷಗಾರರಿಗೆ ನ್ಯಾಯ ಸಿಕ್ಕಿದೆ. ಇದರ ಜೊತೆಗೆ ಇಬ್ಬರ ನಡುವೆ ಬಾಂಧವ್ಯ ಮುಂದುವರೆಯುತ್ತದೆ. ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಶುಲ್ಕ ವಾಪಸ್ ಸಿಗುತ್ತಿದೆ. ರಾಜೀ ಆಗದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಲೋಕ್ ಅದಾಲತ್ ಮೂಲಕ ಪ್ರಕರಣ ತ್ವರಿತವಾಗಿ ಇತ್ಯರ್ಥವಾಗುವುದರಿಂದ ಜನರ ಸಮಯ ಮತ್ತು ಹಣ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸ್ನೇಹ ಭಾವನೆಯಿಂದಿರುತ್ತಾರೆ ಎಂದರು.
ಮತ್ತೆ ಒಂದಾದ ದಂಪತಿ ಜಿಲ್ಲೆಯಲ್ಲಿ ಬಾಕಿ ಇದ್ದ ಜೀವನಾಂಶ ಪ್ರಕರಣಗಳ ಪೈಕಿ ಕೌಟುಂಬಿಕ ಭಿನ್ನಾಭಿಪ್ರಾಯ, ವಿವಿಧ ಕಾರಣಕ್ಕೆ ಕೌಟುಂಬಿಕ ಸಮಸ್ಯೆಯಿಂದ ವಿಚ್ಛೇಧನ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಏಳು ಜೋಡಿ ರಾಜೀ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ. ಅನೇಕ ಪ್ರಕರಣ ಇತ್ಯರ್ಥಕ್ಕೆ ಮುಂದೆ ಬರುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಲೋಕ್ ಅದಾಲತ್ಗೆ ಸಹಕರಿಸಿದ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಸಂಧಾನಕಾರರಿಗೆ, ವಕೀಲರು, ಕಕ್ಷಿದಾರರಿಗೆ ಸೇರಿದಂತೆ ಇತರರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಭಿನಂದಿಸಲಿದೆ ಎಂದು ಹೇಳಿದರು.ಇದನ್ನೂ ಓದಿ: ಯಾರನ್ನೂ ಯಾರಿಗೂ ಕಂಪೇರ್ ಮಾಡಬೇಡಿ, ಪ್ರತಿಯೊಬ್ಬರು ಯುನೀಕ್ ಡೈರೆಕ್ಟರ್: ಉಪೇಂದ್ರ