– ಪ್ರತಿಭಟನೆಗೆ ನಾನು ಕಾರಣ ಅಲ್ಲ
ಕೊಪ್ಪಳ: ಬಿಜೆಪಿ ಹಾಗೂ ಸಚಿವ ಸಿ.ಟಿ ರವಿ ಕುಟುಂಬಸ್ಥರಿಗೆ ಪಾಕಿಸ್ತಾನದಲ್ಲಿ ಸಂಬಂಧಿಕರಿರಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಸಿ.ಟಿ ರವಿಗೆ ಟಾಂಗ್ ನೀಡಿದ್ದಾರೆ.
ಕೊಪ್ಪಳದ ಕುಷ್ಟಗಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಸಿ.ಟಿ.ರವಿ ಹಾಗೂ ಮೋದಿ ಪದೇ ಪದೇ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಹಿಡಿದ ಉಗ್ರರನ್ನು ಇವರು ಬಿಡುತ್ತಾರೆ. ಪ್ರಧಾನಮಂತ್ರಿ ಪಾಕಿಸ್ತಾನಕ್ಕೆ ಹೋಗಿ ಊಟ ಮಾಡಿ ಬರುತ್ತಾರೆ. ಟ್ರೈನ್ ಸ್ಟಾರ್ಟ್ ಮಾಡುತ್ತಾರೆ. ಇದನ್ನೆಲ್ಲ ನೋಡಿದರೆ ಸಿ.ಟಿ.ರವಿ ಕುಟುಂಬಸ್ಥರು ಪಾಕಿಸ್ತಾನದಲ್ಲಿರಬೇಕು ಎಂದು ವ್ಯಂಗ್ಯವಾಡಿದರು.
ನನಗೆ ಸಿ.ಟಿ.ರವಿ ಪ್ರಶ್ನೆ ಅಲ್ಲ, ಅಸಂವಿಧಾನಿಕ ಕಾನೂನು ನಮಗೆ ಪ್ರಶ್ನೆ. ಮೊದಲಿನಂದಲೂ ಸಿ.ಟಿ.ರವಿ ಪಾಕಿಸ್ತಾನದ ಬಗ್ಗೆ ಮಾತಾಡ್ತಾರೆ. ನಾವು ಯಾವಾಗಲೂ ಪಾಕಿಸ್ತಾನದ ಬಗ್ಗೆ ಮಾತನಾಡಲ್ಲ ಇದನ್ನೆಲ್ಲ ನೋಡಿದರೆ ಸಿ.ಟಿ.ರವಿ ಕುಟುಂಬಸ್ಥರಿಗೆ ಮತ್ತು ಬಿಜೆಪಿಗೆ ಪಾಕಿಸ್ತಾನದಲ್ಲಿ ಸಂಬಂಧಿಕರಿದ್ದಾರೆ. ನಾವು ಭಾರತಕ್ಕೆ ಜೀವ ಕೊಡುತ್ತೇವೆ. ನಾವು ಇವರ ಭಾರತದಲ್ಲಿ ಇಲ್ಲ. ಅಂಬೇಡ್ಕರ್ ಭಾರತದಲ್ಲಿ ಇದ್ದೇವೆ ಎಂದು ಕಿಡಿಕಾರಿದರು.
ಇದೇ ವೇಳೆ ರಾಜ್ಯದಲ್ಲಿನ ಪ್ರತಿಭಟನೆಗೆ ಯು.ಟಿ ಖಾದರ್ ಕಾರಣ ಎಂಬ ಸಿ ಎಂ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪ್ರತಿಭಟನೆಗೆ ನಾನು ಕಾರಣ ಅಲ್ಲ, ಜನರ ಭಾವನೆಗಳನ್ನು ನಾನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ನೆರೆ ರಾಜ್ಯದಲ್ಲಿ ಆಗ್ತಿರೋ ಪ್ರತಿಭಟನೆಯನ್ನು ನೋಡಿ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು.
ರಾಜ್ಯದಲ್ಲಿ ಏನೂ ಇಲ್ಲ ಅಂದ್ರೆ ನಿಷೇಧಾಜ್ಞೆ ಯಾಕೆ ಎಂದು ಪ್ರಶ್ನೆ ಮಾಡಿದ ಖಾದರ್, ಉತ್ತರ ಭಾರತರ ರಾಜ್ಯದಲ್ಲಿ ಯಾರಾದ್ರೂ ಪ್ರತಿಭಟನೆ ಮಾಡಲು ಹೇಳಿದ್ರಾ ಅಲ್ಲಿನ ವಾತಾವರಣ ಗಮನಿಸಿ ನಾನು ಮಾತಾಡಿದ್ದೇನೆ. ನಾನು ಕರ್ನಾಟಕ ಹೊತ್ತಿ ಉರಿಯುತ್ತೆ ಎಂದು ಹೇಳಿಲ್ಲ, ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ. ಬೇರೆ ರಾಜ್ಯ ಹೊತ್ತು ಉರಿಯೋದನ್ನು ಗಮನಿಸಿ ನಾನು ಮಾತಾಡಿದ್ದೇನೆ. ಕಾಯ್ದೆ ಜಾರಿಯಾದ್ರೆ ಬೇರೆ ರಾಜ್ಯದ ಪರಸ್ಥಿತಿ ಇಲ್ಲಿ ಆಗಬಹುದು ಎಂದು ಹೇಳಿದ್ದೇನೆ ಎಂದು ಯುಟಿ ಖಾದರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.