ಕೊಪ್ಪಳ: ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಬಗ್ಗೆ ಯಾರಿಗೆ ಗೊತಿಲ್ಲ ಹೇಳಿ. ಇಡಿ ದೇಶವೇ ವಿಜ್ಞಾನಿಗಳ ಈ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿತ್ತು. ಇದೀಗ ಅಂತಹದ್ದೆ ಒಂದು ಪ್ರಯತ್ನ ನಮ್ಮ ಕೊಪ್ಪಳದ ವಿದ್ಯಾರ್ಥಿಗಳು ಮಾಡಿದ್ದಾರೆ.
ಎಂಜಿನಿಯರ್ಸ್ ಡೇ ಅಂಗವಾಗಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಪ್ರಯೋಗಾರ್ಥವಾಗಿ ವಿಜ್ಞಾನಿಗಳ ರೀತಿಯಲ್ಲಿ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಉಡಾವಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಎಲ್ಕೆಜಿಯಿಂದ ಹಿಡಿದು ಆರನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳು ಈ ಪ್ರಯೋಗದಲ್ಲಿ ತಮ್ಮ ಚಾಣಕ್ಯತನವನ್ನು ತೋರಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಸಹಾಯ ಪಡೆದು ತಾವೇ ಮಾದರಿಗಳನ್ನು ತಯಾರಿಸಿದ್ದಾರೆ.
ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಒಂದು ತಿಂಗಳ ಕಾಲಾವಕಾಶ ತಗೆದುಕೊಂಡು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ಶಾಲಾ ಆವರಣದಲ್ಲೇ ಚಂದ್ರ ಮತ್ತು ಭೂಮಿಯನ್ನು ತಯಾರು ಮಾಡಿ ಡ್ರೋಣ್ ಬಳಸಿ ವಿಕ್ರಮ್ ಲ್ಯಾಂಡರ್ ಯಾವ ರೀತಿ ಚಂದ್ರನ ಮೇಲೆ ಕಾರ್ಯಚರಣೆ ನಡೆಸಿದೆ ಅನ್ನುವ ಒಂದು ಚಿಕ್ಕ ಪ್ರಯೋಗವನ್ನು ಮಾಡಿ ಮಕ್ಕಳಲ್ಲಿ ಉಪಗ್ರಹದ ಬಗ್ಗೆ ಜ್ಞಾನ ಮೂಡಿಸುವ ಪ್ರಯತ್ನ ಮಾಡಲಾಯಿತು.
ಚಂದ್ರಯಾನದ ಪ್ರಯೋಗ ಅಷ್ಟೇ ವಿವಿಧ ರೀತಿಯ ವೈಜ್ಞಾನಿಕ ಪ್ರಯೋಗವನ್ನು ಸಹ ವಿದ್ಯಾರ್ಥಿಗಳು ಮಾಡಿದ್ದು ಪಾಲಕರು ತಮ್ಮ ಮಕ್ಕಳು ಮಾಡಿದ ವೈಜ್ಞಾನಿಕ ಪ್ರಯೋಗ ನೋಡಿ ಖುಷಿಪಟ್ಟರು. ಇನ್ನೂ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಶಿಕ್ಷಕರು ಸಹ ಸಾಥ್ ನೀಡಿದರು.