ಕೊಪ್ಪಳ: ಪ್ರಧಾನಿ ಮೋದಿ ಮುಸ್ಲಿಮರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೋದಿ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತ್ರಿವಳಿ ತಲಾಖ್ ತಂದ್ರಿ, ಗಂಡ ಜೈಲಿಗೆ ಹೋದರೆ ಹೆಂಡತಿ ಏನ್ ಮಾಡಬೇಕು. ಅವಳು ಎಲ್ಲಿಗೆ ಹೋಗಬೇಕು ಎಂದು ಮೋದಿಗೆ ಅನ್ಸಾರಿ ಪ್ರಶ್ನೆ ಮಾಡಿದ್ರು.
ನನ್ನ ಪೌರತ್ವ ಕಸಿದುಕೊಳ್ಳಲು ಇವರು ಯಾರು? ನನ್ನ ಹೆರಿಗೆ ಸೂಲಗಿತ್ತಿ ಮಾಡಿಸಿದ್ದಾಳೆ. ನಾವೆಲ್ಲಿ ಸರ್ಟಿಫಿಕೆಟ್ ತರೋಣ? ನಾವೆಲ್ಲಿ ದಾಖಲೆ ತರೋಣ ಎಂದು ಆಕ್ರೋಶ ಹೊರಹಾಕಿದರು.
ಮುಸ್ಲಿಂ ಸಮಾಜಕ್ಕೆ ತೊಂದರೆ ಕೊಡಬೇಕೆಂದು ಈ ಸಿಎಎ ಕಾಯ್ದೆ ತಂದಿದ್ದಾರೆ. ಮುಸ್ಲಿಂ ಸಮಾಜ ರಾಮಮಂದಿರ ವಿಷಯದಲ್ಲೂ ಸುಮ್ಮನಿದ್ದರೂ, ನಮಗೆ ತ್ರಿವಳಿ ತಲಾಖ್ ಬೇಕಿರಲಿಲ್ಲ. ಮುಸ್ಲಿಮರನ್ನು ಸದೆ ಬಡಿಯಲು ಕಾನೂನು ತಂದಿದ್ದಾರೆ. ಇದು ಮೋದಿ ದೇಶ ಅಲ್ಲ, ನಮ್ಮ ದೇಶ. ಮೋದಿ ಈ ದೇಶಕ್ಕಾಗಿ ಹೋರಾಟ ಮಾಡಿಲ್ಲ. ನಮ್ಮ ಪೂರ್ವಜರು ಹೋರಾಟ ಮಾಡಿದ್ದಾರೆ. ಮುಸ್ಲಿಮರೇನು ಕುರಿಗಳಾ, ದನಗಳಾ ಪ್ರಶ್ನೆ ಮಾಡಿದರೆ ಬಂಧನ ಕೇಂದ್ರ ತೆರೆಯುತ್ತೇವೆ ಎನ್ನೋಕೆ. ಈ ದೇಶದ ಪ್ರಧಾನಿ ಸುಳ್ಳು ಹೇಳುತ್ತಿರೋದು ದೊಡ್ಡ ದುರಂತ ಎಂದರು.
ಇದೇ ವೇಳೆ ಸೋಮಶೇಖರ್ ವಿವಾದಾತ್ಮಕ ಹೇಳಿಕೆಗೆ ಅನ್ಸಾರಿ ತೀರುಗೇಟು ನೀಡಿದರು. ಸೋಮಶೇಖರ್ ರೆಡ್ಡಿ ಮಾತನಾಡಿದ್ದು ನೋಡಿದರೆ, ಅವರ ಮಾನಸಿಕ ಸ್ಥಿತಿ ಗೊತ್ತಾಗುತ್ತದೆ. ಸೋಮಶೇಖರ್ ರೆಡ್ಡಿ ಅವರಿಂದ ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡುವವರ ಮರ್ಯಾದೆ ಹೋಗುತ್ತದೆ. ಖಡ್ಗ ಹಿಡಿದುಕೊಳ್ತೀವಿ ಎಂದು ಸೋಮಶೇಖರ್ ರೆಡ್ಡಿ ಹೇಳುತ್ತಾರೆ. ಅಂದ್ರೆ ಬೇರೆಯವರೇನು ಬಳೆ ಹಾಕಿಕೊಂಡಿದ್ದಾರಾ? ನೀವು ಖಡ್ಗ ಹಿಡಿದುಕೊಂಡ್ರೆ, ಮತ್ತೊಬ್ಬರು ಇನ್ನೊಂದು ಹಿಡ್ಕೊಂಡ್ರೆ ಏನ್ ಮಾಡ್ತೀರಾ? ನಮ್ಮ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದು ಯೋಚನೆ ಮಾಡಿದ್ದೀರಾ ಎಂದು ಕಿಡಿಕಾರಿದರು.