ಕೊಪ್ಪಳ: ಮಹಿಳೆಯ ನಾಗಿಣಿ ಅವತಾರ ನೋಡಿ ಜನರು ದಂಗಾದ ಘಟನೆ ಕೊಪ್ಪಳದಲ್ಲಿ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಕೋಟುಮುಚಗಿ ಗ್ರಾಮದ ಶೀಲಮ್ಮ ಕೆರೆ ಹಾವು ಕೊರಳಿಗೆ ಹಾಕಿಕೊಂಡಿದ್ದ ಮಹಿಳೆ. ಶೀಲಮ್ಮ ಹಿರೇಬಗನಾಳ ಗ್ರಾಮದ ಹೊರವಲಯದಲ್ಲಿರುವ ಕೋಳಿ ಫಾರಂವೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಂದು ಮಧ್ಯಾಹ್ನ ಕೋಳಿ ಫಾರಂನಲ್ಲಿ ಕೆರೆ ಹಾವು ಬಂದಿದೆ. ಇದನ್ನು ಗಮನಿಸಿದ ಶೀಲಮ್ಮ ಹಾವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹಿರೇಬಗನಾಳ ಗ್ರಾಮಕ್ಕೆ ಬಂದು ಬಿಟ್ಟಳು. ಈ ವೇಳೆ ಶೀಲಮ್ಮ ಹಾವನ್ನು ತನ್ನ ಕೊರಳಿನಲ್ಲಿ ಹಾಕಿಕೊಂಡು ಗ್ರಾಮದ ಗವಿಸಿದ್ದೇಶ್ವರ ಮಠದಲ್ಲಿ ನೃತ್ಯ ಮಾಡಿದ್ದಾಳೆ.
ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಕೋಳಿ ಫಾರಂನಿಂದ ಶೀಲಮ್ಮ ಹಾವನ್ನು ಹಿಡಿದುಕೊಂಡು ಬಂದಿದ್ದಾಳೆ. ಇದನ್ನು ಗಮನಿಸಿದ ಗ್ರಾಮಸ್ಥರು ಶೀಲಮ್ಮನನ್ನು ಹಿಂಬಾಲಿಸಿದರು. ಬಳಿಕ ಶೀಲಮ್ಮ ಗವಿಸಿದ್ದೇಶ್ವರ ಮಠಕ್ಕೆ ಬಂದು ಅಲ್ಲಿ ಹಾವಿಗೆ ಪೂಜೆ ಮಾಡಿದ್ದಳು. ಈ ವೇಳೆ ದೇವಸ್ಥಾನದ ಹೊರಗಡೆ ಇರುವ ನಾಗಪ್ಪನ ಕಲ್ಲಿನ ಮೂರ್ತಿಯ ಬಳಿ ಹಾವನ್ನು ಕೊರಳಿಗೆ ಹಾಕಿಕೊಂಡು ನೃತ್ಯ ಮಾಡಿದ್ದಾಳೆ.
ಈ ವೇಳೆ ಗ್ರಾಮಸ್ಥರು ಹಾವನ್ನು ಬಿಡು ಎಂದು ಮನವಿ ಮಾಡಿದರೂ ಸಹ ಶೀಲಮ್ಮ ಬಿಡಲಿಲ್ಲ. ಕೊನೆಗೆ ಗ್ರಾಮಸ್ಥರು ಶೀಲಮ್ಮ ಮನವೊಲಿಸಿ ಗ್ರಾಮದ ಹೊರವಲಯದ ಸಣ್ಣ ದೇವಸ್ಥಾನವೊಂದರಲ್ಲಿ ಬಿಟ್ಟು ಬಂದಿದ್ದಳು. ಬಳಿಕ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಓಂ ನಮಃ ಶಿವಾಯ ಎಂದು ಪ್ರಾರ್ಥನೆ ಸಲ್ಲಿಸದಳು. ನಂತರ ಗ್ರಾಮಸ್ಥರೆಲ್ಲರೂ ಶೀಲಮ್ಮಳನ್ನು ಹಾವು ಬಿಟ್ಟು ಬಂದಿದ್ದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಿಸುವಲ್ಲಿ ಯಶಸ್ವಿಯಾದರು. ಶೀಲಮ್ಮ ಹಾವಿನೊಂದಿಗೆ ವರ್ತಿಸಿದ ರೀತಿ ಅಚ್ಚರಿಪಟ್ಟರು.
ಶೀಲಮ್ಮ ಕೊರಳಿನಲ್ಲಿ ಹಾಕಿಕೊಂಡಿದ್ದ ಹಾವು ಕೆರೆ ಹಾವಾಗಿದ್ದು, ಪೊರೆ ಬಂದಿತ್ತು ಎನ್ನಲಾಗಿದೆ. ಶೀಲಮ್ಮ ಹಾವನ್ನು ತನ್ನ ಕೊರಳಿನಲ್ಲಿ ಹಾಕಿಕೊಂಡು ಎರಡು ಗಂಟೆಗಳ ಕಾಲ ಇದ್ದದ್ದು ನಿಜಕ್ಕೂ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಶೀಲಮ್ಮ ಕೊರಳಿನಲ್ಲಿ ಹಾವು ಹಾಕಿಕೊಂಡಿರುವುದನ್ನು ಗ್ರಾಮಸ್ಥರು ಟಿಕ್ ಟ್ಯಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಮಾಡಿದ್ದಾರೆ. ಶೀಲಮ್ಮ ಹಾವಿನೊಂದಿಗೆ ಈ ರೀತಿ ವರ್ತನೆಗೆ ಕಾರಣ ಏನು ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.