– ನನ್ನನ್ನ ಸ್ವಲ್ಪವೂ ಫೋಕಸ್ ಮಾಡ್ಲಿಲ್ಲ
ಕೊಪ್ಪಳ: ನನಗೆ ಸಚಿವ ಸ್ಥಾನ ಸಿಗದಿರಲು ಮಾಧ್ಯಮದವರು ಕಾರಣ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಲ್ಲಿ ಮಾತನಾಡಿದ ಶಾಸಕರು, ನನಗೆ ಸಚಿವ ಸ್ಥಾನ ಕೊಡಿಸುವುದರಲ್ಲಿ ಮಾಧ್ಯಮದವರು ವಿಫಲರಾಗಿದ್ದಾರೆ. ಟಿವಿಗಳಲ್ಲಿ ನನ್ನನ್ನ ಸ್ವಲ್ಪವೂ ಫೋಕಸ್ ಮಾಡಲಿಲ್ಲ. ಸಚಿವ ಸ್ಥಾನದ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ಇದನ್ನೂ ಓದಿ: 12 ನಿಮಿಷದಲ್ಲಿ ಯುದ್ಧ ಆಗಿದೆ ಅಂತಾರೆ, ಡೆಡ್ಬಾಡಿ ಎಲ್ಲಿವೆ: ಶಾಸಕ ರಾಘವೇಂದ್ರ ಹಿಟ್ನಾಳ್
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ನಮ್ಮ ಜಿಲ್ಲೆಯಲ್ಲಿ ಅಮರೇಗೌಡ ಬಯ್ಯಾಪುರ ಹಾಗೂ ನಾನು ಇಬ್ಬರು ಶಾಸಕರಿದ್ದೇವೆ. ಅವರು ನನಗಿಂತ ಹಿರಿಯರಿದ್ದು, ನಾಲ್ಕಕ್ಕಿಂತಲೂ ಅಧಿಕ ಬಾರಿ ಶಾಸಕರಾಗಿದ್ದಾರೆ. ಪಕ್ಷದ ಹೈಕಮಾಂಡ್ ಯಾರನ್ನು ಮಂತ್ರಿ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಜಾತಿ ಕೋಟಾ ಏನಿದ್ದರೂ ಬಿಜೆಪಿಯಲ್ಲಿ, ನಮ್ಮಲ್ಲಿಲ್ಲ. ನಮ್ಮ ಜಿಲ್ಲೆಯವರನ್ನು ಮಂತ್ರಿ ಮಾಡಿ ಎನ್ನುವುದು ನಮ್ಮ ವಾದ. ಇಷ್ಟು ದಿನ ಬೇರೆ ಜಿಲ್ಲೆಯವರು ಸಚಿವರಾಗಿದ್ದಾರೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ಉತ್ತಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬಹುದು. ಇನ್ನೂ ವಯಸ್ಸಿದೆ, ಸಚಿವ ಸ್ಥಾನ ಕೊಟ್ಟರೆ ನಿರ್ವಹಿಸುತ್ತೇನೆ ಎಂದು ಮಂತ್ರಿಗಿರಿ ಬೇಡಿಕೆ ವ್ಯಕ್ತಪಡಿಸಿದರು.
ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆ ಆಗುವ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಬಿಜೆಪಿಯಲ್ಲಿ ಅಸಮಾಧಾನವಿರುವ ಶಾಸಕರು ಇದ್ದಾರೆ. ಕಳೆದ ಒಂದು ವರ್ಷದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ಅವರ ಶಾಸಕರನ್ನೆ ಕಾಂಗ್ರೆಸ್ ಆಪರೇಷನ್ ಹಂತಕ್ಕೆ ಮಾಧ್ಯಮದವರು ತಂದು ನಿಲ್ಲಿಸಿದ್ದೀರಿ ಎಂದರು.
ಯಾವುದೇ ಶಾಸಕರು ಪಕ್ಷದ ಸಿದ್ಧಾಂತ ಬಿಟ್ಟು ಹೋಗಲು ಸಿದ್ಧರಾಗಿರುವುದಿಲ್ಲ. ಹಾಗೊಂದು ವೇಳೆ ನಿಮ್ಮ ಮೂಲಕ ಅವರು ಬರುವುದಾದರೆ ನಾನು ಹೈಕಮಾಂಡ್ಗೆ ಮಾತನಾಡುತ್ತೇನೆ. ನಿಮಗೆ ಮಾಹಿತಿ ಇದ್ದರೆ ಹೇಳಿ ನಾನು ಮಾತನಾಡುತ್ತೇನೆ. ಪಕ್ಷ ಬಿಟ್ಟು ಬರುತ್ತಾರೆ ಎನ್ನುವುದಾದರೆ ನೇತೃತ್ವವಹಿಸುತ್ತೇನೆ ಎಂದರು ಹೇಳಿದರು.