ಕೊಪ್ಪಳ: ನಮ್ಮ ಕಾಲಿಗೆ ಆಕಸ್ಮಾತ್ ಒಂದು ಮುಳ್ಳು ಚುಚ್ಚಿದ್ರೆ ಸಾಕು, ಜೀವ ಹೋದಂಗೆ ಆಗತ್ತೆ. ಆದರೆ ಇಲ್ಲೊಂದು ಊರಿನಲ್ಲಿ ಮುಳ್ಳಿನ ಜಾತ್ರೆಯೇ ನಡೆಯುತ್ತದೆ. ಭಕ್ತರು ಯಾವುದೇ ಭಯವಿಲ್ಲದೆ ಮುಳ್ಳುಗಳ ಮೇಲೆ ಜಿಗಿಯುತ್ತಾರೆ.
ಹೌದು. ಕೊಪ್ಪಳದ ಲೇಬಗೇರಿ ಗ್ರಾಮದಲ್ಲಿ ನಡೆದ ವಿಶೇಷ ಆಚರಣೆಯೊಂದು ನಡೆಯುತ್ತಿದೆ. ಪ್ರತಿವರ್ಷದಂತೆ ಇಲ್ಲಿ ಈ ಬಾರಿಯೂ ಆಂಜನೇಯನ ಕಾರ್ತಿಕೋತ್ಸವದಲ್ಲಿ ಮುಳ್ಳು ಹಾರುವ ಕಾರ್ಯಕ್ರಮ ಜರುಗಿತು. ಸುಮಾರು 100 ವರ್ಷಗಳಿಂದ ಈ ಸಂಪ್ರದಾಯವನ್ನು ಆಚರಣೆ ಮಾಡುತ್ತಾ ಬರಲಾಗಿದೆ. ಗ್ರಾಮದ ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಮುಳ್ಳಿನ ಮೇಲೆ ಜಿಗಿಯುತ್ತಾರೆ. ಅದರಲ್ಲೂ ಯುವಕರು ಹೆಚ್ಚಾಗಿ ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ ಎಂದು ಭಕ್ತರಾದ ಚನ್ನಪ್ಪ ಹೇಳಿದ್ದಾರೆ.
ಬೆಳ್ಳಂಬೆಳಗ್ಗೆ ಗ್ರಾಮಸ್ಥರು ಕಾಡಿಗೆ ಹೋಗಿ ಯಾವುದೇ ಆಯುಧ ಬಳಸದೇ ಕೈಯಿಂದ ಮುಳ್ಳಿನ ಗಿಡಗಳನ್ನು ಕಿತ್ತು ತಂದು ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಕುತ್ತಾರೆ. ಬಳಿಕ ಭಕ್ತರು ಮುಳ್ಳಿನ ರಾಶಿ ಮೇಲೆ ಹಾರಿ ಭಕ್ತಿ ಸಮರ್ಪಿಸುತ್ತಾರೆ. ಹೀಗೆ ಹಾರಿದವರ ಮೈ ಮೇಲೆ ಗಾಯಗಾಳಾಗಿದ್ದರೂ ರಾತ್ರಿ ಕರಿ ಕಂಬಳಿಯ ಮೇಲೆ ಮಲಗಿಕೊಂಡರೆ ಮುಳ್ಳುಗಳೆಲ್ಲ ಹೊರಬರುತ್ತವೆ ಎಂದು ಇಲ್ಲಿನ ಯುವಕರು ಹೇಳುತ್ತಾರೆ.
ಒಟ್ಟಾರೆ ಮೂಢನಂಬಿಕೆಯೋ, ಭಕ್ತಿಯ ಪರಾಕಾಷ್ಟೆಯೋ ಈ ಗ್ರಾಮದಲ್ಲಿ ನಡೆಯುವ ಮುಳ್ಳು ಹಾರುವುದು ಮಾತ್ರ ನಿಜಕ್ಕೂ ಅಚ್ಚರಿಯೇ.