ಉಡುಪಿ: ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವೆಬ್ಸೈಟ್ ನಕಲಿ ಮಾಡಿ ಭಕ್ತರಿಗೆ ಸೇವಾರೂಪದ ಹಣದಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರಿನ ಹಿರಿಯ ಅರ್ಚಕ ನರಸಿಂಹ ಅಡಿಗ ಸ್ಪಷ್ಟನೆ ಕೊಟ್ಟಿದ್ದಾರೆ.
ಮುಜರಾಯಿ ಇಲಾಖೆಗೆ ದೇವಸ್ಥಾನ ಒಳಪಡುವ ಮೊದಲು ಮತ್ತು ನಂತರ ಅರ್ಚಕ ಮನೆತನ ಶ್ರದ್ಧೆಯಿಂದ ಭಕ್ತಿಯಿಂದ ಮೂಕಾಂಬಿಕೆಯ ಸೇವೆ ಮಾಡುತ್ತಿದ್ದೇವೆ. ನಾವು ಯಾವುದೇ ಕರ್ತವ್ಯ ಲೋಪ ಮಾಡಿಲ್ಲ. ಎಲ್ಲಾ ಅರ್ಚಕರು ಈ ಬೆಳವಣಿಗೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ. ಇದು ಮಿಥ್ಯಾರೋಪ. ನಮ್ಮ ಚೌಕಟ್ಟಿನಲ್ಲಿ ನಾವು ಪೂಜೆ ಪುನಸ್ಕಾರ ಮಾಡುತ್ತಿದ್ದೇವೆ ಎಂದರು.
ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಲೋಪವಾಗಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಕೊಲ್ಲೂರು ದೇವಾಲಯದ ಅಧಿಕೃತ ವೆಬ್ ಸೈಟ್ಅನ್ನು ನಕಲಿ ಮಾಡಿ ಭಕ್ತರಿಂದ ಸೇವೆಯ ಹಣವನ್ನು ಆನ್ಲೈನ್ ಮೂಲಕ ಹಾಕಿಸಿಕೊಂಡು ದೇವಸ್ಥಾನಕ್ಕೆ ಸಂಬಧಿಸಿದವರು ಅಕ್ರಮ ಎಸಗಿದ್ದರು. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.