ಕೋಲಾರ: ತುಮಕೂರಿನ ಸಿದ್ಧಗಂಗಾ ಮಠದ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಗೆ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ 25 ಟನ್ ಹಣ್ಣು ಮತ್ತು ತರಕಾರಿಗಳನ್ನು ಕಳುಹಿಸಿಕೊಡಲಾಯಿತು.
ನಾಳೆ ಸಿದ್ದಗಂಗಾ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತಾಧಿಗಳು ಸೇರುವುದರಿಂದ ಮಠದಲ್ಲಿ ಅನ್ನ ದಾಸೋಹ ಮಾಡುವುದಕ್ಕೆ ಉಪಯುಕ್ತವಾಗಲೆಂದು ಹಣ್ಣು ತರಕಾರಿಗಳನ್ನ ಕಳುಹಿಸಿಕೊಡಲಾಯಿತು. ಕೋಲಾರದ ಎಪಿಎಂಸಿ ಮಾರುಕಟ್ಟೆಯ ತರಕಾರಿ ದಲ್ಲಾಳಿಗಳು, ವರ್ತಕರು, ರೈತರು ಸೇರಿ 10 ಟನ್ ಟೊಮ್ಯಾಟೊ, 15 ಟನ್ ವಿವಿಧ ಬಗೆಬಗೆಯ ತರಕಾರಿಗಳಾದ ಮೂಲಂಗಿ, ಬೀನ್ಸ್, ಹೂಕೋಸು, ಕ್ಯಾರೆಟ್ ಹಾಗೂ ಅಕ್ಕಿ ಮುಂತಾದವುಗಳನ್ನು 2 ಗೂಡ್ಸ್ ಲಾರಿಗಳ ಮೂಲಕ ಸಿದ್ಧಗಂಗಾ ಮಠಕ್ಕೆ ಕಾಣಿಕೆ ರೂಪದಲ್ಲಿ ನೀಡಿದ್ದಾರೆ. ಇದನ್ನೂ ಓದಿ: ಶ್ರೀಗಳ ಪುಣ್ಯಾರಾಧನೆಗೆ ಭಕ್ತರಿಂದ 11 ಟನ್ ಅಕ್ಕಿ ಕಾಣಿಕೆ!
ಶ್ರೀ ಶಿವಕುಮಾರ ಶ್ರೀಗಳು ಮಠಕ್ಕೆ ಬರುವ ಭಕ್ತರು ಹಸಿದು ವಾಪಸ್ ಹೋಗಬಾರದೆಂದು ಅನ್ನ ದಾಸೋಹವನ್ನು ಮಾಡಿಸುತ್ತಿದ್ದರು. ಅಲ್ಲದೆ ಮಠಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಅನ್ನ, ವಿದ್ಯೆ, ಆಶ್ರಯ ನೀಡಿ ತ್ರಿವಿಧ ದಾಸೋಹಿ ಎಂದು ಖ್ಯಾತಿ ಪಡೆದಿದ್ದಾರೆ. ಹಾಗಾಗಿ ಸ್ವಾಮೀಜಿಗಳ ಸೇವೆ ಹೀಗೆಯೇ ಮುಂದುವರಿಯಬೇಕೆಂದು, ಅವರು ಅಗಲಿದ ನಂತರವೂ ಮಠದಲ್ಲಿ ದಾಸೋಹಕ್ಕೆ ಯಾವುದೇ ತೊಂದರೆಯಾಗಬಾರದೆಂದು ಕೋಲಾರದ ಮಾರುಕಟ್ಟೆ ವತಿಯಿಂದ ಈ ಸಹಾಯವನ್ನು ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv