ಕೋಲಾರ: ಐಟಿ-ಇಡಿ ಕೊಲೆ ಮಾಡುವ ಉದ್ದೇಶ ಇಟ್ಟುಕೊಂಡು ದಾಳಿ ಮಾಡಿರಲ್ಲ. ಅವರು ನೂರಕ್ಕೆ ನೂರು ಸರಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರು ಪರಮೇಶ್ವರ್ ಆಪ್ತ ಸಹಾಯಕನ ಸಾವಿಗೆ ಐಟಿಯೇ ಕಾರಣ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ರೀತಿಯಲ್ಲಿ ಎದುರಿಸಬೇಕಿತ್ತು ಅದು ಬಿಟ್ಟು ಹೀಗೆ ಮಾಡಿಕೊಳ್ಳುವುದು ತಪ್ಪು. ಅವರ ಪತ್ನಿ ಕೂಡ ಆತ್ಮಹತ್ಯೆ ಅಲ್ಲ ಕೊಲೆ ಎಂದಿದ್ದಾರೆ. ಐಟಿ ಉದ್ದೇಶ ಕೊಲೆ ಮಾಡುವುದಲ್ಲ ಎಂದು ಹೇಳಿದರು.
ದೇಶದಲ್ಲಿ ಎಲ್ಲಾ ಕಡೆ ಐಟಿ ಇಡಿ ದಾಳಿ ನಡೆಯುತ್ತಿದೆ. ಲೆಕ್ಕ ಕೊಟ್ಟು ಸಾಧಿಸಬೇಕು. ಎಲ್ಲವೂ ಸರಿಯಾಗಿದ್ದರೆ ಭಯ ಪಡುವ ಅಗತ್ಯವಿಲ್ಲ. ಆತ್ಮಹತ್ಯೆ ಒಂದೇ ದಾರಿಯಲ್ಲ ಎಂದು ಸಲಹೆ ನೀಡಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡ ಕೆ.ಎಚ್ ಮುನಿಯಪ್ಪ ಅವರ ದಲಿತರನ್ನ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ ಕೆ.ಎಚ್ ಮುನಿಯಪ್ಪ ಒಬ್ಬರೇ ದಲಿತರಲ್ಲ, ದಲಿತರನ್ನೇ ಟಾರ್ಗೆಟ್ ಮಾಡುವ ಅಗತ್ಯ ಐಟಿಗಿಲ್ಲ ಎಂದರು.
ಐಟಿ ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಅವರೇನಾದರೂ ಅಕ್ರಮ ಹಣ ಸಂಪಾದಿಸಿ ತಪ್ಪಿಸಿಕೊಳ್ಳಲು ಹೀಗೆ ಮಾತನಾಡುತ್ತಿದ್ದಾರಾ ಗೊತ್ತಿಲ್ಲ ಎಂದು ಮುನಿಯಪ್ಪ ಅವರಿಗೆ ಟಾಂಗ್ ನೀಡಿದರು. ಕಾನೂನಿಗೆ ಎಲ್ಲರೂ ತಲೆ ಬಾಗಬೇಕು. ಬಿಜೆಪಿ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿಸುತ್ತಿಲ್ಲ. ಐಟಿ ಅವರೇ ದಾಳಿ ಮಾಡುತ್ತಿರುವುದು ಎಂದು ತಿಳಿಸಿದರು.