ಕೋಲಾರ: ಕೆಪಿಸಿಸಿ ಅಧ್ಯಕ್ಷ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ, ಯಾರೇ ಆಗಲಿ ಒಗ್ಗಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಇಂದು ಕೋಲಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಗಾಂಧಿವನದ ಬಳಿ 134 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನ ಹಮ್ಮಿಕೊಂಡಿದ್ರು. ಇದಕ್ಕೂ ಮೊದಲು ಕಾಂಗ್ರೆಸ್ ಭವನದಿಂದ ಎಂ.ಜಿ ರಸ್ತೆಯ ಮೂಲಕ ಜಾಥಾ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಸಂಸದರು ಹಾಗೂ ನಾಯಕರು ನನ್ನ ಹೆಸರು ಸೂಚಿಸಿದ್ದಾರೆ. ನಾನು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು.
ಮಂಗಳೂರಿನಲ್ಲಿ ಗಲಭೆ ವೇಳೆ ಮೃತಪಟ್ಟವರಿಗೆ ನೀಡಿದ್ದ ಪರಿಹಾರ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಂದು ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ವಾಪಸ್ ಪಡೆದಿರುವುದು ಇದೇ ಮೊದಲು. ಇದಕ್ಕಿಂತ ಕೆಟ್ಟ ಕೆಲಸ ಈ ದೇಶದಲ್ಲಿ ಯಾವುದೂ ಇಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಹಿರಿಯ ನಾಯಕರಾಗಿ ದೇಶದ ಆಗುಹೋಗುಗಳು ಗೊತ್ತಿದ್ದರೂ ಯಾವ ಕಾರಣಕ್ಕಾಗಿ ಹಿಂತೆಗೆದುಕೊಂಡಿದ್ದಾರೆ ಗೊತ್ತಿಲ್ಲ. ಪರಿಹಾರ ವಾಪಸ್ ಪಡೆದಿರುವುದು ದುರಾದೃಷ್ಟಕರ. ಪ್ರಾಣ ಕಳೆದುಕೊಂಡವರಿಗೆ ಪರಿಹಾರ ಕೊಡಬೇಕಾಗಿರೋದು ನಮ್ಮ ಧರ್ಮ. ಕಮಲನಾಥ್ ಹಾಗೂ ಮಮತಾ ಬ್ಯಾನರ್ಜಿ ನಾವು ಪರಿಹಾರ ಕೊಡುತ್ತೇವೆ ಅಂತಿದ್ದಾರೆ. ಈ ಕೆಲಸದಿಂದ ನಮಗೆ ನಾಚಿಕೆ ಆಗುತ್ತಿದೆ. ಅಲ್ಲದೆ ವಚನ ಭ್ರಷ್ಟರಾಗದೆ ತಕ್ಷಣ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.