ಕೋಲಾರ: ನೂರಾರು ವರ್ಷಗಳಿಂದ ಗ್ರಾಮದ ಜನ ಜಾನುವಾರುಗಳಿಗೆ ಆಧಾರವಾಗಿದ್ದ ಕೆರೆಗಳು ಸಾಧ್ಯ ಭೂ ಒತ್ತುವರಿದಾರರ ಪ್ರಭಾವಕ್ಕೆ ಸಿಲುಕ್ಕಿದ್ದು, ಪ್ರಭಾವಿ ವ್ಯಕ್ತಿಗಳಿಂದ ಒತ್ತುವರಿಯಾಗಿದ್ದ ಭೂಮಿ ಸದ್ಯ ಜನ, ಜಾನುವಾರುಗಳಿಗೆ ವಿಷದ ಭೂಮಿಯಾಗಿ ಪರಿಣಮಿಸಿರುವ ಘಟನೆ ತಾಲೂಕಿನ ಶಿಳ್ಳಂಗೆರೆ ಗ್ರಾಮದಲ್ಲಿ ನಡೆದಿದೆ.
ಶಿಳ್ಳೆಂಗೆರೆ ಗ್ರಾಮದಲ್ಲಿ ಎರಡು ಬೃಹತ್ ಕೆರೆಗಳನ್ನು ಈ ಭಾಗದ ಜನರು ಹಲವು ವರ್ಷಗಳಿಂದ ನೀರು ಹಾಗೂ ದನಕರುಗಳ ಮೇವಿಗೆ ಆಶ್ರಯಿಸಿದ್ದಾರೆ. ಹೀಗಿರುವಾಗ ಕಳೆದ ಕೆಲವು ವರ್ಷಗಳಿಂದ ಕೆರೆಗಳಲ್ಲಿ ನೀರಿಲ್ಲ ಎಂಬ ಕಾರಣಕ್ಕೆ ಗ್ರಾಮದ ಕೆಲವು ಪ್ರಭಾವಿಗಳು ಕೆರೆಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಇದರಿಂದ ಗ್ರಾಮದ ಜನರು ದನಕರುಗಳನ್ನು ಮೇಯಿಸಲು ಜಾವಿಲ್ಲದಂತಾಗಿದೆ.
ಒತ್ತುವರಿದಾರರು ತಮ್ಮ ಪ್ರಭಾವದಿಂದ ಕೆರೆಗೆ ಹೋಗಲು ರಸ್ತೆಯೂ ಇಲ್ಲದಂತೆ ಮಾಡಿದ್ದಾರೆ. ಒಂದು ವೇಳೆ ಆ ಹೊಲಗಳನ್ನು ದಾಟಿ ಕೆರೆಯಲ್ಲಿ ಜಾನುವಾರುಗಳನ್ನು ಮೇಯಿಸಲು ಹೋದರೆ ಕೆರೆಯಲ್ಲಿ ವಿಷ ಸಿಂಪಡಿಸುತ್ತಿದ್ದಾರೆ. ಇದರಿಂದ ಕಳೆದ ಮೂರು ತಿಂಗಳಲ್ಲಿ ಹತ್ತಾರು ಎಮ್ಮೆ, ನೂರಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಕಳೆದ ಕೆಲವು ತಿಂಗಳಿಂದ ಗ್ರಾಮದಲ್ಲಿ ಈ ರೀತಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದ ಕೆಲವು ಪ್ರಭಾವಿಗಳು ಈಗಾಗಲೇ 50 ಎಕರೆಗೂ ಮೇಲ್ಪಟ್ಟು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ಕೆರೆಗೆ ಹೋಗಲು ಇರುವ ರಸ್ತೆಗಳನ್ನು ಒತ್ತುವರಿ ಮಾಡಿದ್ದು, ಜನರು ಕೆರೆಗೆ ಒಡಾಡಲು ರಸ್ತೆ ಇಲ್ಲದಂತಾಗಿದೆ. ಗ್ರಾಮಸ್ಥರು ಒತ್ತುವರಿದಾರರನ್ನು ಪ್ರಶ್ನೆ ಮಾಡಿದರೆ ಜೀವ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಒತ್ತುವರಿದಾರರು ಆ ಭಾಗಕ್ಕೆ ಜಾನುವಾರುದಂತೆ ಮಾಡಲು ವಿಷ ಹಾಕಿದ್ದಾರೆ. ಜೀವನ ನಡೆಸಲು ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಜನರು ಪ್ರಾಣಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಇದರಿಂದ ಬೇಸತ್ತ ಗ್ರಾಮದ ಜನರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಜ.21 ರಂದು ಪ್ರತಿಭಟನೆ ಮಾಡಿದ್ದರು. ಆದರೆ ಇದುವರೆಗೂ ಗ್ರಾಮಸ್ಥರ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ದಿನದಿಂದ ದಿನಕ್ಕೆ ಗ್ರಾಮದ ಕೆರೆಗಳ ಒತ್ತುವರಿ ಸಮಸ್ಯೆ ಹೆಚ್ಚಾಗುತ್ತಲೇ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಒತ್ತುವರಿ ತೆರವು ಮಾಡಿ ಜಾನುವಾರುಗಳ ಜೀವ ಉಳಿಸಬೇಕಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.